ತಿರುವನಂತಪುರಂ: 1ರಿಂದ 12ನೇ ತರಗತಿವರೆಗಿನ ಶಾಲಾ ಮಕ್ಕಳಿಗಾಗಿ ಅಪಘಾತ ಮತ್ತು ಜೀವ ವಿಮಾ ಯೋಜನೆಯನ್ನು ಕೇರಳ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಿಸಿದೆ.
ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್ ಗುರುವಾರ 2026-27ನೇ ಸಾಲಿನ ಬಜೆಟ್ ಮಂಡಿಸಿದರು.
ಕೇರಳದ ಹಸಿರು ಸೇನೆ (ಘನತ್ಯಾಜ್ಯ ವಿಲೇವಾರಿ ಸಿಬ್ಬಂದಿ) ಸದಸ್ಯರು, ಆಟೊರಿಕ್ಷಾ, ಟ್ಯಾಕ್ಸಿ ಚಾಲಕರು, ಲಾಟರಿ ಟಿಕೆಟ್ ಮಾರಾಟಗಾರರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಸಹ ಹೊಸ ಅಪಘಾತ ವಿಮಾ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.
ರಾಜ್ಯ ವಿಮಾ ಇಲಾಖೆ ಮತ್ತು ಕೇರಳ ಸರ್ಕಾರ ಜಂಟಿಯಾಗಿ ವಿಮಾ ಯೋಜನೆಯನ್ನು ಜಾರಿಗೊಳಿಸಲಿವೆ. ಈ ಯೋಜನೆಗೆ ವಾರ್ಷಿಕ ₹15 ಕೋಟಿ ಖರ್ಚು ಅಂದಾಜು ಮಾಡಲಾಗಿದ್ದು, ಬಜೆಟ್ನಲ್ಲಿ ಇದಕ್ಕಾಗಿ ಮೊತ್ತ ಮೀಸಲಿಡಲಾಗಿದೆ ಎಂದು ಬಾಲಗೋಪಾಲ್ ಹೇಳಿದರು.
ಸರ್ಕಾರಿ ನೌಕರು ಮತ್ತು ಪಿಂಚಣಿದಾರರಿಗಾಗಿ 'ಮೆಡಿಸೆಪ್-0 2.0' ಆರೋಗ್ಯ ವಿಮಾ ಯೋಜನೆಯನ್ನು ಪರಿಷ್ಕರಿಸಿ ಫೆಬ್ರುವರಿ 1ರಿಂದ ಜಾರಿಗೊಳಿಸಲಾಗುವುದು. ಅಂದಾಜು 11 ಲಕ್ಷದಷ್ಟು ಸರ್ಕಾರಿ ನೌಕರರಿಗೆ ಇದರ ಪ್ರಯೋಜನ ಲಭಿಸಲಿದೆ ಎಂದು ಅವರು ತಿಳಿಸಿದರು.
ಸರ್ಕಾರಿ ಸ್ವಾಮ್ಯದ ಕಂಪನಿಗಳು, ಸಹಕಾರಿ ಸಂಘಗಳ ಉದ್ಯೋಗಿಗಳಿಗೂ ಮೆಡಿಸೆಪ್ ಮಾದರಿಯ ವಿಮಾ ಯೋಜನೆ ಜಾರಿಗೊಳಿಸಲಾಗುವುದು. ಈಗಾಗಲೇ ಜಾರಿಯಲ್ಲಿರುವ ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆಗೆ ₹50 ಕೋಟಿ, ಮೀನುಗಾರರ ಗುಂಪು ವಿಮಾ ಯೋಜನೆಗೆ ₹10 ಕೋಟಿಯನ್ನು ಬಜೆಟ್ನಲ್ಲಿ ಒದಗಿಸಲಾಗಿದೆ ಎಂದರು.
'ಮೆನೋಪಾಸ್' ಕ್ಲಿನಿಕ್ ಆರಂಭ
ಮುಟ್ಟು ನಿಲ್ಲುವ ವಯೋಮಾನದ ಮಹಿಳೆಯರಿಗಾಗಿಯೇ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷವಾದ 'ಮೆನೋಪಾಸ್' ಕ್ಲಿನಿಕ್ಗಳನ್ನು ಆರಂಭಿಸಲಾಗುವುದು ಎಂದು ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಪ್ರಕಟಿಸಿದರು. ಮಹಾರಾಷ್ಟ್ರ ಸರ್ಕಾರವು ರಾಜ್ಯದಾದ್ಯಂತ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನವರಿ 14ರಂದು ಮೆನೋಪಾಸ್ ಕ್ಲಿನಿಕ್ಗಳಿಗೆ ಚಾಲನೆ ನೀಡಿತ್ತು. ಅದೇ ಮಾದರಿಯಲ್ಲಿ ಕೇರಳ ಸರ್ಕಾರವು ಬಜೆಟ್ನಲ್ಲಿ ಘೋಷಣೆ ಮಾಡಿದೆ. ಇದಕ್ಕಾಗಿ ₹ 3 ಕೋಟಿ ಅನುದಾನ ಒದಗಿಸಲಾಗಿದೆ.

