ಅಮರಾವತಿ: ಬೆಂಗಳೂರು- ಕಡಪ- ವಿಜಯವಾಡ ಆರ್ಥಿಕ ಕಾರಿಡಾರ್ (ಎನ್ಎಚ್-544ಜಿ) ನಿರ್ಮಾಣದ ವೇಳೆ ನಾಲ್ಕು ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಲು ಸಹಕಾರ ನೀಡಿದ್ದಕ್ಕಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಧನ್ಯವಾದ ತಿಳಿಸಿದರು.
ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಮಾತನಾಡಿದ ಗಡ್ಕರಿ, 'ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸತ್ಯ ಸಾಯಿ ಬಾಬಾ ಅವರ ಆಶೀರ್ವಾದದೊಂದಿಗೆ ವಿಶ್ವ ದಾಖಲೆಗಳು ಸೃಷ್ಟಿಯಾದವು. ಚಂದ್ರಬಾಬು ನಾಯ್ಡು ಸೇರಿದಂತೆ ಕಾರಿಡಾರ್ ನಿರ್ಮಾಣದ ವೇಳೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು' ಎಂದರು.
'ನಾವೀನ್ಯ ತಂತ್ರಗಳನ್ನು ಅಳವಡಿಸಿಕೊಳ್ಳುತ್ತ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ, ವೇಗವಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಕೇಂದ್ರವು ನಿರಂತರವಾಗಿ ಶ್ರಮಿಸುತ್ತಿದೆ' ಎಂದು ಹೇಳಿದರು.
ಎನ್ಎಚ್ 544 ಜಿ ಆರ್ಥಿಕ ಕಾರಿಡಾರ್ನಲ್ಲಿ, 29 ಲೇನ್ ಕಿ.ಮೀ ಉದ್ದದ ರಸ್ತೆ ನಿರ್ಮಾಣದ ವೇಳೆ ಹೆಚ್ಚು ಸಮಯ ನಿರಂತರ ಕಾಮಗಾರಿ ಹಾಗೂ 24 ಗಂಟೆಗಳಲ್ಲಿ 10,600 ಟನ್ ಬಿಟುಮಿನಸ್ ಕಾಂಕ್ರೀಟ್ ಹಾಕುವ ಮೂಲಕ ಕಳೆದ ಜ.6ರಂದು ಎರಡು ದಾಖಲೆಗಳನ್ನು ನಿರ್ಮಿಸಲಾಯಿತು.
ಬಳಿಕ ನಿರಂತರವಾಗಿ 57,500 ಟನ್ ಬಿಟುಮಿನಸ್ ಕಾಂಕ್ರೀಟ್ ಹಾಕುವ ಮೂಲಕ ಮತ್ತು 156 ಲೇನ್ ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಿದ್ದಕ್ಕಾಗಿ ಜ.11 ರಂದು ಎರಡು ದಾಖಲೆಗಳನ್ನು ನಿರ್ಮಿಸಲಾಯಿತು.
ಈ ಆರ್ಥಿಕ ಕಾರಿಡಾರ್ ಒಟ್ಟು 6 ಲೇನ್ಗಳನ್ನು (ಷಟ್ಪತ) ಹೊಂದಿದ್ದು, 343 ಕಿ.ಮೀ. ಉದ್ದವಿದೆ.

