ನವದೆಹಲಿ: ತಮಿಳು ನಟ ಹಾಗೂ ಟಿವಿಕೆ ನಾಯಕ ವಿಜಯ್ ನಟನೆಯ ಜನ ನಾಯಗನ್ ಸಿನಿಮಾದ ಸೆನ್ಸಾರ್ ವಿವಾದವು ರಾಜಕೀಯ ಆಯಾಮ ಪಡೆದುಕೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, 'ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಜನ ನಾಯಗನ್ ಸಿನಿಮಾಗೆ ತಡೆ ನೀಡಿರುವುದು ತಮಿಳು ಸಂಸ್ಕೃತಿಯ ಮೇಲಿನ ದಾಳಿಯಾಗಿದೆ.
ತಮಿಳರ ಧ್ವನಿ ಹತ್ತಿಕ್ಕಲು ಮೋದಿಗೆ ಸಾಧ್ಯವಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
ಟಿವಿಕೆ ಪಕ್ಷದ ಸ್ಥಾಪಕರಾಗಿರುವ, ನಟ ವಿಜಯ್ ಅವರ ಕೊನೆಯ ಚಿತ್ರ ಎಂದು ಜನ ನಾಯಗನ್ ಸಿನಿಮಾವನ್ನು ಬಿಂಬಿಸಲಾಗಿದೆ. ಚಿತ್ರವು ಜ.9ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್ ವಿವಾದವು ಕೋರ್ಟ್ ಮೆಟ್ಟಿಲೇರಿದ್ದರಿಂದ ಅದು ವಿಳಂಬವಾಗಿದೆ.
ಜನ ನಾಯಗನ್ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರಕ್ಕೆ ತಡೆ ನೀಡಿ ಮದ್ರಾಸ್ ಹೈಕೋರ್ಟ್ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಇತ್ತೀಚೆಗೆ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

