ಜೈಪುರ: 'ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಂದುವರಿದಿರುವ ದೌರ್ಜನ್ಯವು ಮಾನವೀಯತೆಗೆ ಕಳಂಕ. ಬಾಂಗ್ಲಾದೇಶದ ವಿರುದ್ಧ ಭಾರತ ಯಾವುದೇ ಕ್ರಮ ವಹಿಸದಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜತಾಂತ್ರಿಕ ವೈಫಲ್ಯ' ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹಲೋತ್ ಟೀಕಿಸಿದ್ದಾರೆ.
'ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ 19 ದಿನಗಳ ಅಂತರದಲ್ಲಿ ಐವರು ಮೃತಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದಿಂದ ಶಕ್ತವಾದ ರಾಜತಾಂತ್ರಿಕ ಒತ್ತಡದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. 1971ರ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ದೃಢವಾದ ರಾಜತಾಂತ್ರಿಕ ಮತ್ತು ರಾಜಕೀಯ ನಿಲುವು ತೆಗೆದುಕೊಂಡಿದ್ದರು. ಇದು ಎರಡೂ ದೇಶಗಳ ಇತಿಹಾಸ ಮತ್ತ ಭೌಗೋಳಿಕತೆಯನ್ನು ಬದಲಿಸಿತು' ಎಂದು ಗೆಹಲೋತ್ ಸ್ಮರಿಸಿದ್ದಾರೆ.
'ಕೇಂದ್ರ ಸರ್ಕಾರವು ವಾಡಿಕೆ ಕ್ರಮದಂತೆ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆಯೇ ಹೊರತು, ಬಾಂಗ್ಲಾದಲ್ಲಿರುವ ಹಿಂದೂಗಳ ಸುರಕ್ಷತೆ, ಘನತೆಯ ಬದುಕಿಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ತುರ್ತು ಕ್ರಮ ವಹಿಸಬೇಕಿರುವುದು ಕೇಂದ್ರ ಸರ್ಕಾರದ ನೈತಿಕ ಮತ್ತು ರಾಜತಾಂತ್ರಿಕ ಜವಾಬ್ದಾರಿ' ಎಂದು ಅವರು ಹೇಳಿದ್ದಾರೆ.

