ರಾಯಪುರ: ಛತ್ತೀಸ್ಗಡದ ಧಮ್ತಾರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಿಗೂಢ ಸರಣಿ ಘಟನೆಗಳಲ್ಲಿ 35 ಶಾಲಾ ಮಕ್ಕಳು ಶಾಲೆಯ ಆವರಣದಲ್ಲಿ ಬ್ಲೇಡ್ಗಳಿಂದ ತಮ್ಮ ಮಣಿಗಂಟುಗಳನ್ನು ಕತ್ತರಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ಮಕ್ಕಳು ಪರಸ್ಪರ ಅನುಕರಿಸಿದ್ದಾರೆ ಎನ್ನಲಾಗಿದೆ.
ಈ ಕೃತ್ಯಕ್ಕೆ ಬೇರೆ ಯಾವುದೇ ಕಾರಣವನ್ನು ಈವರೆಗೆ ನಿರ್ಧರಿಸಲಾಗಿಲ್ಲ.
ಘಟನೆಯು ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಶಾಲಾ ಮೇಲ್ವಿಚಾರಣೆ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೂಲಗಳ ಪ್ರಕಾರ ಆರರಿಂದ ಎಂಟನೇ ತರಗತಿಯ 21 ಬಾಲಕರು ಮತ್ತು 14 ಬಾಲಕಿಯರು ಪರಸ್ಪರರನ್ನು ಅನುಕರಿಸಿ ಸ್ವತಃ ಗಾಯ ಮಾಡಿಕೊಂಡಿದ್ದಾರೆ. ಘಟನೆಯು ಬೆಳಕಿಗೆ ಬರುವ ಮುನ್ನ ಸುಮಾರು ಒಂದು ತಿಂಗಳಿನಿಂದಲೂ ಈ ಆತಂಕಕಾರಿ ಪ್ರವೃತ್ತಿ ಮುಂದುವರಿದಿದ್ದು, ಶಾಲಾ ಆಡಳಿತದ ನಿರ್ಲಕ್ಷ್ಯವನ್ನು ಹಲವರು ಆರೋಪಿಸಿದ್ದಾರೆ.
ಫೆ.13ರಂದು ಪೋಷಕರು ಮಕ್ಕಳ ಕೈಗಳಲ್ಲಿ ಗಾಯದ ಗುರುತುಗಳನ್ನು ಗಮನಿಸಿ ಶಾಲಾ ಅಧಿಕಾರಿಗಳಿಗೆ ತಿಳಿಸಿದಾಗ ಘಟನೆಯು ಬೆಳಕಿಗೆ ಬಂದಿದೆ. ನಂತರ ಅಧಿಕಾರಿಗಳು ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಶಾಲೆಯ ಆವರಣದಲ್ಲಿ ಬ್ಲೇಡ್ಗಳು ಹೇಗೆ ತಲುಪಿದ್ದವು ಮತ್ತು ವಾರಗಳು ಕಳೆದರೂ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಗಾಯಗಳನ್ನು ಗಮನಿಸಲು ಶಿಕ್ಷಕರು ವಿಫಲಗೊಂಡಿದ್ದು ಹೇಗೆ ಎಂದು ಕುಪಿತ ಪೋಷಕರು ಪ್ರಶ್ನಿಸಿದ್ದಾರೆ. ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಬಳಕೆ ಸೇರಿದಂತೆ ಸಂಭವನೀಯ ಬಾಹ್ಯ ಕಾರಣಗಳ ಬಗ್ಗೆಯೂ ಕಳವಳಗಳು ವ್ಯಕ್ತವಾಗುತ್ತಿವೆ.
ತಾವು ಈಗ ಸುರಕ್ಷತಾ ಕ್ರಮಗಳನ್ನು ಬಲಗೊಳಿಸುತ್ತಿರುವುದಾಗಿ ಶಾಲಾ ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದಾರೆ. ಆದರೆ ಗಾಯಗಳನ್ನು ಗಮನಿಸುವಲ್ಲಿ ವಿಳಂಬವು ತೀವ್ರ ಟೀಕೆಗಳಿಗೆ ಕಾರಣವಾಗಿದೆ. ಈ ಘಟನೆಯು ಸರಕಾರಿ ಶಾಲೆಗಳಲ್ಲಿಯ ಮೇಲ್ವಿಚಾರಣೆ ವ್ಯವಸ್ಥೆ ಮತ್ತು ಮಕ್ಕಳ ಒಟ್ಟಾರೆ ಸುರಕ್ಷತೆಯ ಮೇಲೆ ಬೆಳಕು ಚೆಲ್ಲಿದೆ.
ಈ ನಡುವೆ, ಉಪವಿಭಾಗಾಧಿಕಾರಿ ನಭ್ ಸಿಂಗ್ ಅವರು, ಗೇಮಿಂಗ್ ಚಾಲೆಂಜ್ ಮತ್ತು ಮಾದಕ ದ್ರವ್ಯ ಸೇವನೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
'ಫೆ.13ರಂದು ನಮಗೆ ಘಟನೆಯ ಕುರಿತು ಗೊತ್ತಾದಾಗ ಕೈಗೆ ಗಾಯ ಮಾಡಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಲು ತಂಡವೊಂದನ್ನು ನಾವು ಕಳುಹಿಸಿದ್ದೆವು. ನಾವು ಪೋಷಕರ ಮೊಬೈಲ್ ಫೋನ್ಗಳನ್ನೂ ಪರಿಶೀಲಿಸಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಗೇಮಿಂಗ್ ಚಾಲೆಂಜ್ ನಮಗೆ ಕಂಡುಬಂದಿಲ್ಲ. ನಾವು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇವೆ. ಪ್ರಾಥಮಿಕ ವಿಚಾರಣೆಯು ಮಾದಕ ದ್ರವ್ಯ ವ್ಯಸನವನ್ನೂ ತಳ್ಳಿ ಹಾಕಿದೆ. ಮೇಲ್ನೋಟಕ್ಕೆ ಮಾತ್ರ ಗಾಯಗಳಾಗಿದ್ದು, ಅವು ಆಳವಾಗಿಲ್ಲ' ಎಂದು ಅವರು ತಿಳಿಸಿದರು.

