ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರ ಪೀಠ ಈ ಆದೇಶ ನೀಡಿತು. ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿಯನ್ನು ರಚಿಸಿ, ನಡೆಯುತ್ತಿರುವ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾಯಾಲಯ ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ಅನಿಲ್ ಅಂಬಾನಿ ದೇಶ ತೊರೆಯುವ ಸಾಧ್ಯತೆ ಕುರಿತು ವ್ಯಕ್ತವಾದ ಆತಂಕದ ಹಿನ್ನಲೆಯಲ್ಲಿ, ಅವರ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ನ್ಯಾಯಾಲಯಕ್ಕೆ ಭರವಸೆ ನೀಡಿದರು. "ಅವರು ಇಲ್ಲೇ ಇದ್ದಾರೆ. ಈ ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ತೊರೆಯುವುದಿಲ್ಲ" ಎಂದು ರೋಹಟ್ಗಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ದಿಲ್ಲಿ ಹೈಕೋರ್ಟ್ ನಲ್ಲಿ ಸಹ ಇದೇ ರೀತಿಯ ಭರವಸೆ ನೀಡಲಾಗಿತ್ತು. ಆದರೂ ಅವರು ಪಲಾಯನ ಮಾಡಿದ್ದಾರೆ" ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ರೋಹಟ್ಗಿ, "ಅವರು ಹಿಂತಿರುಗಿ 5000 ಕೋಟಿ ರೂ. ಪಾವತಿಸಿದ್ದಾರೆ" ಎಂದರು.
ತನಿಖೆಗೆ ಅಡ್ಡಿಯಾಗದಂತೆ ಎಲ್ಲಾ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಸಾಲಿಸಿಟರ್ ಜನರಲ್ ಭರವಸೆ ಹಾಗೂ ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ತೊರೆಯುವುದಿಲ್ಲ ಎಂಬ ಅಂಬಾನಿ ಪರ ವಕೀಲರ ಭರವಸೆಯನ್ನು ಆದೇಶದಲ್ಲಿ ದಾಖಲಿಸಲಾಗಿದೆ.
ಅನಿಲ್ ಅಂಬಾನಿ ನೇತೃತ್ವದ ಗುಂಪಿನ ವ್ಯವಹಾರಗಳ ತನಿಖೆಗೆ ಎಸ್ಐಟಿ ರಚಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದುವರಿಸಿದೆ. ತನಿಖೆಗಳು 2002ರ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಮತ್ತು 1999ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಕಾನೂನುಬದ್ಧವಾಗಿ ನಡೆಯುತ್ತಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ನಾವು ಈಗ ಗಮನಿಸುತ್ತಿರುವ ನಿಜವಾದ ವಂಚನೆ 40,000 ಕೋಟಿ ರೂ." ಎಂದು ತಿಳಿಸಿದರು. ಇದಕ್ಕೆ ಪ್ರತಿಯಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, "ಈಗ ಪ್ರತ್ಯೇಕ ಎಫ್ಐಆರ್ ದಾಖಲಿಸಲು ಬಯಸುತ್ತೀರಾ? ಇವು ದೂರುಗಳಲ್ಲವೇ? ಇದು ಪ್ರತ್ಯೇಕ ಅಪರಾಧವಲ್ಲವೇ?" ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮೆಹ್ತಾ, "ಮೊದಲಿಗೆ ಎಸ್ಬಿಐಯಿಂದ ಎಫ್ಐಆರ್ ದಾಖಲಾಗಿತ್ತು. ನಂತರ ಇತರ ಬ್ಯಾಂಕ್ಗಳಿಗೆ ವಂಚನೆ ಕುರಿತು ಮಾಹಿತಿ ನೀಡಲಾಗಿದೆ" ಎಂದು ಹೇಳಿದರು.

