ನವದೆಹಲಿ: ಮಣಿಪುರದಲ್ಲಿ ಹೊಸ ಸರ್ಕಾರ ರಚನೆಗೆ ಸಜ್ಜಾಗುತ್ತಿದ್ದಂತೆ ರಾಜ್ಯದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಬುಧವಾರ ರದ್ದುಗೊಳಿಸಲಾಗಿದೆ.
ಈಶಾನ್ಯ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೂ ಕೆಲವೇ ಗಂಟೆಗಳ ಮೊದಲು ಈ ಕ್ರಮ ಕೈಗೊಳ್ಳಲಾಗಿದೆ. ಎನ್ಡಿಎ ಶಾಸಕಾಂಗ ಪಕ್ಷದ ನಾಯಕ ವೈ.ಖೇಮ್ಚಂದ್ ಸಿಂಗ್ ಅವರು ನೂತನ ಮುಖ್ಯಮಂತ್ರಿಯಾಗಲಿದ್ದಾರೆ.
ಸಿಂಗ್ ಇಂದು (ಬುಧವಾರ) ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮಣಿಪುರ 2025ರ ಫೆಬ್ರುವರಿ 13ರಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿತ್ತು. 60 ಶಾಸಕರ ಸಂಖ್ಯಾಬಲ ಹೊಂದಿರುವ ಮಣಿಪುರದಲ್ಲಿ 2027ರವರೆಗೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
'ಸಂವಿಧಾನದ 356ನೇ ವಿಧಿಯ ಷರತ್ತು (2) ರ ಅನ್ವಯ ನೀಡಲಾದ ಅಧಿಕಾರ ಚಲಾಯಿಸಿ, ಭಾರತದ ರಾಷ್ಟ್ರಪತಿಗಳಾದ ನಾನು, ದ್ರೌಪದಿ ಮುರ್ಮು, ಮಣಿಪುರ ರಾಜ್ಯಕ್ಕೆ 2025ರ ಫೆಬ್ರುವರಿ 13ರಂದು ನಾನು ಹೊರಡಿಸಿದ್ದ ರಾಷ್ಟ್ರಪತಿ ಆಡಳಿತದ ಆದೇಶವನ್ನು 2026ರ ಫೆಬ್ರುವರಿ 4ರಿಂದ ಜಾರಿಗೆ ಬರುವಂತೆ ರದ್ದುಗೊಳಿಸುತ್ತಿದ್ದೇನೆ' ಎಂದು ರಾಷ್ಟ್ರಪತಿಗಳು ಹೊರಡಿಸಿದ್ದ
ಆದೇಶದಲ್ಲಿ ಘೋಷಣೆಯಲ್ಲಿ ತಿಳಿಸಲಾಗಿದೆ.
ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ತಿಂಗಳುಗಟ್ಟಲೆ ನಡೆದ ಜನಾಂಗೀಯ ಹಿಂಸಾಚಾರದ ಬಳಿಕ, 2025ರ ಫೆಬ್ರುವರಿ 9ರಂದು ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

