ವಾದ ಮಂಡಿಸುವ ಅವಕಾಶ ನೀಡದೆ ಆದೇಶ ಹೊರಡಿಸಿರುವುದರಿಂದ ಮಂಜೂರಾತಿ ಪ್ರಕ್ರಿಯೆ ಅಸ್ಥಿರವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾ.ಮಾಹೇಶ್ವರಿ ಮತ್ತು ನ್ಯಾ. ಅತುಲ್ ಚಂದೂರ್ಕರ್ ಅವರನ್ನೊಳಗೊಂಡ ನ್ಯಾಯಪೀಠ ಗುಜರಾತ್ ಹೈಕೋರ್ಟ್ ಆದೇಶವನ್ನು ಬದಿಗಿರಿಸಿತು.
ಜುಲೈ 4, 2024ರಂದು ಸಂಬಂಧಿತ ಗ್ರಾಮದ ಹುಲ್ಲುಗಾವಲು ಜಮೀನಿನ ಕುರಿತು ರಾಜ್ಯ ಮರುಸ್ಥಾಪನೆ ಪ್ರಾಧಿಕಾರದ ಆದೇಶವನ್ನು ಆಧರಿಸಿ ನೇರವಾಗಿ ಹೈಕೋರ್ಟ್ ಈ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಹೈಕೋರ್ಟ್ನ ಈ ಆದೇಶವನ್ನು ಬದಿಗಿರಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಈ ಕುರಿತು ಹೊಸದಾಗಿ ನಿರ್ಣಯ ಕೈಗೊಳ್ಳುವಂತೆ ಪ್ರಾಧಿಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಒಂದು ವೇಳೆ ಅದಾನಿ ಪೋರ್ಟ್ಸ್ ಎರಡು ವಾರಗಳೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಿದರೆ ಅವನ್ನು ಪರಿಗಣಿಸುವಂತೆಯೂ ರಾಜ್ಯ ಪ್ರಾಧಿಕಾರಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಹೊಸದಾಗಿ ನಿರ್ಣಯ ಕೈಗೊಳ್ಳುವುದಕ್ಕೂ ಮುನ್ನ ಎಲ್ಲ ವಾದಿಗಳಿಗೂ ವಿಚಾರಣೆಯ ಅವಕಾಶ ಒದಗಿಸುವುದು ಕಡ್ಡಾಯ ಎಂದೂ ನ್ಯಾಯಾಲಯ ಹೇಳಿದೆ.
ಇದೇ ವೇಳೆ, ರಾಜ್ಯ ಸರ್ಕಾರ ಮರುಪರಿಗಣನೆಯ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವವರೆಗೂ ಜುಲೈ 10, 2024ರ ಆದೇಶ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದೂ ನ್ಯಾಯಾಲಯ ಹೇಳಿದೆ.
2005ರಲ್ಲಿ ಈ ವ್ಯಾಜ್ಯ ಸ್ಫೋಟಗೊಂಡಿದ್ದು, ನವಿನಾಲ್ ಗ್ರಾಮದ ಹುಲ್ಲುಗಾವಲು ಜಮೀನು ಎಂದು ವರ್ಗೀಕೃತಗೊಂಡಿದ್ದ 231 ಹೆಕ್ಟೇರ್ ಜಮೀನನ್ನು ಮುಂದ್ರಾ ಪೋರ್ಟ್ಸ್ಗೆ ಮಂಜೂರು ಮಾಡಲಾಗಿತ್ತು. ಈ ಜಮೀನನ್ನು ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡಿತ್ತು. ಈ ಕ್ರಮವನ್ನು ಪ್ರಶ್ನಿಸಿ 2014ರಲ್ಲಿ ನವಿನಾಲ್ ಗ್ರಾಮಸ್ಥರು ಗುಜರಾತ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸೌಜನ್ಯ: barandbench.com

