ಎರಡು ದಿನಗಳ ಅಧಿಕೃತ ಭೇಟಿಗಾಗಿ ಪ್ರಧಾನಿ ಮೋದಿ ಅವರು ಇಸ್ರೇಲ್ ಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭೇಟಿಯ ಅವಧಿಯಲ್ಲಿ ಪ್ರಧಾನಿ ಅಲ್ಲಿನ ಉನ್ನತ ನಾಯಕತ್ವದೊಂದಿಗೆ ಮಾತುಕತೆ ನಡೆಸಿ, ಇಸ್ರೇಲ್ ಸಂಸತ್ ನೆಸ್ಸೆಟ್ ನಲ್ಲಿ ಭಾಷಣ ಮಾಡಲಿದ್ದಾರೆ.
ವಯನಾಡಿನ ಕಾಂಗ್ರೆಸ್ ಸಂಸದೆಯೂ ಆಗಿರುವ ಪ್ರಿಯಾಂಕಾ ಗಾಂಧಿ ಸಾಮಾಜಿಕ ಜಾಲತಾಣ 'X'ನಲ್ಲಿನ ಪೋಸ್ಟ್ ನಲ್ಲಿ, "ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮುಂಬರುವ ಇಸ್ರೇಲ್ ಪ್ರವಾಸದ ವೇಳೆ ನೆಸ್ಸೆಟ್ ನಲ್ಲಿ ಮಾತನಾಡುವಾಗ ಗಾಝಾದಲ್ಲಿ ಸಾವಿರಾರು ಮುಗ್ಧ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆದ ನರಮೇಧವನ್ನು ಉಲ್ಲೇಖಿಸಿ, ಅವರಿಗೆ ನ್ಯಾಯ ಒದಗಿಸುವ ಅಗತ್ಯವನ್ನು ಒತ್ತಿಹೇಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ತಿಳಿಸಿದ್ದಾರೆ.
"ಸ್ವತಂತ್ರ ರಾಷ್ಟ್ರವಾಗಿ ಭಾರತವು ತನ್ನ ಇತಿಹಾಸದುದ್ದಕ್ಕೂ ಸತ್ಯದೆಡೆಗೆ ನಿಂತಿದೆ. ಸತ್ಯ, ಶಾಂತಿ ಮತ್ತು ನ್ಯಾಯದ ಬೆಳಕನ್ನು ಜಗತ್ತಿಗೆ ತೋರಿಸುವ ತನ್ನ ಬದ್ಧತೆಯನ್ನು ನಾವು ಮುಂದುವರಿಸಬೇಕು" ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಪಕ್ಷವು ಮಂಗಳವಾರ ಕೇಂದ್ರ ಸರ್ಕಾರವು ಫೆಲೆಸ್ತೀನಿಯರ ಹಿತಾಸಕ್ತಿಯನ್ನು ಸರ್ಕಾರ ಕೈಬಿಟ್ಟಿದೆ ಎಂದು ಆರೋಪಿಸಿದೆ. ಗಾಝಾದಲ್ಲಿ ನಾಗರಿಕರ ಮೇಲೆ ದಾಳಿಗಳು 'ನಿರ್ದಯವಾಗಿ' ಮುಂದುವರಿದಿರುವ ಸಂದರ್ಭದಲ್ಲೇ ಪ್ರಧಾನಿ ಇಸ್ರೇಲ್ಗೆ ಭೇಟಿ ನೀಡುತ್ತಿರುವುದನ್ನು ಪಕ್ಷವು ಪ್ರಶ್ನಿಸಿದೆ.
ಕಾಂಗ್ರೆಸ್ ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಫೆಲೆಸ್ತೀನಿಯರ ಪರ ಬದ್ಧತೆಯ ಕುರಿತು ಮೋದಿ ಸರ್ಕಾರ ನೀಡುತ್ತಿರುವ ಹೇಳಿಕೆಗಳು 'ಸಿನಿಕ ಮತ್ತು ಬೂಟಾಟಿಕೆ'ಯಾಗಿವೆ. ವಾಸ್ತವದಲ್ಲಿ ಸರ್ಕಾರ ಅವರನ್ನು ಕೈಬಿಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಭಾರತ-ಇಸ್ರೇಲ್ ನಡುವಿನ ದ್ವಿಪಕ್ಷೀಯ ರಕ್ಷಣಾ ಹಾಗೂ ವ್ಯಾಪಾರ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರ ಭೇಟಿ ಬುಧವಾರದಿಂದ ಆರಂಭವಾಗಲಿದೆ. ಕಳೆದ ಒಂಭತ್ತು ವರ್ಷಗಳಲ್ಲಿ ಇದು ಮೋದಿ ಅವರ ಇಸ್ರೇಲ್ಗೆ ನೀಡುತ್ತಿರುವ ಎರಡನೇ ಭೇಟಿ.

