ತಿರುವನಂತಪುರಂ: ಸಚಿವ ಸಂಪುಟ ಅನುಮೋದಿಸಿರುವ ನೀತಿ ನಿರೂಪಣೆ ಭಾಷಣದ ಬದಲು, ಸದನವನ್ನುದ್ದೇಶಿಸಿ ತಾವು ಮಾರ್ಪಾಡು ಮಾಡಿದ ನೀತಿ ನಿರೂಪಣೆ ಭಾಷಣವನ್ನು ಅಧಿಕೃತ ಭಾಷಣ ಎಂದು ಪರಿಗಣಿಸಬೇಕು ಎಂಬ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರ ಆಗ್ರಹವನ್ನು ಮಂಗಳವಾರ ಕೇರಳ ವಿಧಾನಸಭೆ ತಿರಸ್ಕರಿಸಿದೆ.
ಸಚಿವ ಸಂಪುಟ ಅನುಮೋದಿಸಿರುವ ನೀತಿ ನಿರೂಪಣೆ ಭಾಷಣವನ್ನು ರಾಜ್ಯಪಾಲರು ಏಕಪಕ್ಷೀಯವಾಗಿ ಮಾರ್ಪಾಡು ಮಾಡುವುದು ಅಸಾಂವಿಧಾನಿಕವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ.
ಈ ಹಿಂದೆ ರಾಜ್ಯಪಾಲರು ನೀತಿ ನಿರೂಪಣೆ ಭಾಷಣದ ಕೆಲ ಭಾಗಗಳನ್ನು ಕೈಬಿಟ್ಟಿರುವ ನಿದರ್ಶನಗಳಿದ್ದರೂ, ಸಚಿವ ಸಂಪುಟ ಅನುಮೋದಿಸಿದ ನೀತಿ ನಿರೂಪಣೆ ಭಾಷಣವೇ ಅಧಿಕೃತ ಎಂದು ಅಂದಿನ ಸ್ಪೀಕರ್ಗಳು ರೂಲಿಂಗ್ ನೀಡಿದ್ದಾರೆ. ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳೂ ಇವೆ ಎಂದು ಅವರು ಬೊಟ್ಟು ಮಾಡಿದ್ದಾರೆ.
ಮುಖ್ಯಮಂತ್ರಿಯವರ ಪ್ರತಿಕ್ರಿಯೆಯನ್ನು ಆಧರಿಸಿ, ರಾಜ್ಯಪಾಲರ ಪತ್ರವನ್ನು ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದು ಸ್ಪೀಕರ್ ಎ.ಎನ್. ಶಂಶೀರ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಹಣಕಾಸು ಮುಗ್ಗಟ್ಟು, ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಪಡೆಯುವಲ್ಲಿನ ವಿಳಂಬ ಹಾಗೂ ತೆರಿಗೆ ಹಂಚಿಕೆ ಮತ್ತು ಹಣಕಾಸು ಆಯೋಗದ ಅನುದಾನದ ಬಗ್ಗೆ ನೀತಿ ನಿರೂಪಣೆ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಮೂರು ಭಾಗಗಳನ್ನು ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಕೈಬಿಟ್ಟಿದ್ದರು ಹಾಗೂ ಮಾರ್ಪಾಡು ಮಾಡಿದ್ದರು.
ಈ ನಡುವೆ, ಕೇರಳ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ರಾಜ್ಯ ವಿಧಾನಸಭಾ ಅಧಿವೇಶನ ಮಾರ್ಚ್ 30ರವರೆಗೆ ನಡೆಯಬೇಕಿದ್ದರೂ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

