ಸಂಭಾಲ್: ಚಲನಚಿತ್ರಗಳಲ್ಲಿ ಸನಾತನ ಧರ್ಮದ ವಿರುದ್ಧ ಗುರಿಯಿಡುವ ಚಿತ್ರ ನಿರ್ದೇಶಕರಿಗೆ, ನಿರ್ಮಾಪಕರಿಗೆ ತಕ್ಕ ಪಾಠಕಲಿಸುವುದಾಗಿ ಬಲಪಂಥೀಯ ಹಿಂದುತ್ವವಾದಿ ಸಂಘಟನೆ ಕ್ಷತ್ರಿಯ ಕರ್ಣಿ ಸೇನಾ ಎಚ್ಚರಿಕೆ ನೀಡಿದೆ.
ಕ್ಷತ್ರಿಯ ಕರ್ಣಿ ಸೇನಾದ ರಾಷ್ಟ್ರೀಯ ಅಧ್ಯಕ್ಷರಾದ ರಾಜ್ ಶೇಖಾವತ್ ಅವರು ಶನಿವಾರ ರಾತ್ರಿ ಹಾಲ್ಲು ಸರಾಯ್ನಲ್ಲಿರುವ ಚಾಮುಂಡಾ ದೇವಾಲಯದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ ಆನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ, ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಹಿಂದಿ ಚಿತ್ರಗಳಾದ ಯಾದವ್ಜೀ ಕಿ ಲವ್ ಸ್ಟೋರಿ ಹಾಗೂ 'ಗೂಸ್ಕರ್ ಪಂಡತ್' ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದರು.
'ನಮ್ಮ ದೇವರು ಮತ್ತು ಸಂಸ್ಕೃತಿಯ ಬಗ್ಗೆ ಚಿತ್ರಗಳನ್ನು ತಯಾರಿಸುವ ನಮ್ಮ ನಿರ್ಮಾಪಕರು ಹಾಗೂ ನಿರ್ದೇಶಕರ ಮನೆಗಳಿಗೆ ನುಗ್ಗಿ, ಅವರಿಗೆ ಪಾಠ ಕಲಿಸುವ ದಿನ ಬಂದಿದೆ ಎಂದು ಶೇಖಾವತ್ ಹೇಳಿದ್ದಾರೆ.
ಕ್ಷತ್ರಿಯ ಹಾಗೂ ಬ್ರಾಹ್ಮಣ ಸಮುದಾಯಗಳನ್ನು ಗುರಿಯಿರಿಸಿದ ಬಳಿಕ ಚಿತ್ರತಯಾರಕರು, ಈಗ ಸಿನೆಮಾ ಮೂಲಕ ಯಾದವ್ ಸಮುದಾಯವನ್ನು ಅಪಮಾನಿಸತೊಡಗಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಯುವಜನರನ್ನು ತಪ್ಪುದಾರಿಗೆಳೆಯುವ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಷಯಗಳಿರುವ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆಂದು ಆರೋಪಿಸಿದರು.
'' ಶೀಘ್ರದಲ್ಲೇ ಮುಂಬೈಗೆ ತೆರಳಿ ಇಂತಹ ಚಿತ್ರಗಳನ್ನು ನಿರ್ಮಿಸುವ ನಿರ್ದೇಶಕರ ಮನೆಗಳಿಗೆ ತೆರಳಿ ಕ್ರಮ ಕೈಗೊಳ್ಳುತ್ತೇವೆ . ಇದಕ್ಕಾಗಿ ಸಿದ್ಧರಿರುವಂತೆ ಕರ್ಣಿ ಸೇನಾದ ಕಾರ್ಯಕರ್ತರಿಗೆ ನಾನು ಸೂಚಿಸಿದ್ದೇನೆ'' ಎಂದು ಶೇಖಾವತ್ ತಿಳಿಸಿದರು.
ಫೆಬ್ರವರಿ 27ರಂದು ತೆರೆಕಾಣಲಿರುವ ಯಾದವ್ಜೀ ಕಿ ಲವ್ ಸ್ಟೋರಿ ಚಿತ್ರದ ವಿರುದ್ಧ ಈಗಾಗಲೇ ಇಡೀ ಯಾದವ್ ಸಮುದಾಯ ಪ್ರತಿಭಟನೆ ನಡೆಸುತ್ತಿದೆ ಎಂದರು.
ಯಾದವ್ ಸಮುದಾಯದ ಮಹಿಳೆ ಹಾಗೂ ಮುಸ್ಲಿಂ ವ್ಯಕ್ತಿಯೊಬ್ಬನ ನಡುವಿನ ಪ್ರೇಮಕಥೆಯನ್ನು ಹೊಂದಿರುವ ಯಾದವ್ ಜೀ ಲವ್ಸ್ಟೋರಿ ವಿರುದ್ಧ ಯಾದವ್ ಸಮುದಾಯದ ಕೆಲವು ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತಿವಾಗಿದೆ. ಈ ಚಿತ್ರದಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟಾಗುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ನೂತನ ಯುಜಿಸಿ ನಿಯಮಾವಳಿಗಳ ವಿರುದ್ಧ ಮಾರ್ಚ್ 8ರಂದು ದಿಲ್ಲಿಯಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು. ಯುಜಿಸಿಯ ನಿಯಾವಳಿಯ ಹಿಂತೆಗೆತ ಆಗ್ರಹಿಸಿ 'ಸ್ವರ್ಣ ಸಮಾಜ ಸಮಿತಿ'ಯನ್ನು ರಚಿಸಲಾಗಿದೆ. ಪ್ರಸಕ್ತ ಕ್ಷತ್ರಿಯ ಕರ್ಣಿ ಸೇನಾವು ಈ ವಿಷಯದ ಬಗ್ಗೆ ರಾಜಕೀಯ ಬೆಂಬಲವನ್ನು ಪಡೆಯಲು ವಿವಿಧ ಸಂಸದರ ಜೊತೆ ಸಂಪರ್ಕದಲ್ಲಿರುವುದಾಗಿ ಶೇಖಾವತ್ ತಿಳಿಸಿದ್ದಾರೆ.

