ನವದೆಹಲಿ: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು 'ಇಂಡಿಯಾ' ಕೂಟದ ಸಂಚಾಲಕರಾಗಲು 'ಸೂಕ್ತ ವ್ಯಕ್ತಿ' ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರು ಸೋಮವಾರ ಪ್ರತಿಪಾದಿಸಿದರು.
'ಕೂಟದಲ್ಲಿ ಒಗ್ಗಟ್ಟನ್ನು ಖಾತರಿಪಡಿಸಲು ಪ್ರಾಬಲ್ಯ ಸಾಧಿಸುವ ಪಕ್ಷಕ್ಕಿಂತ ಸಣ್ಣ ಪಕ್ಷದ ನಾಯಕರೊಬ್ಬರು ಆ ಹುದ್ದೆಯಲ್ಲಿ ಕೂರುವುದು ಉತ್ತಮ' ಎಂದು ಅವರು ಅಭಿಪ್ರಾಯಪಟ್ಟರು.
'ಸದ್ಯ 2029ರ ಚುನಾವಣೆಯೇ ನಮ್ಮ ಗುರಿ. ಹೀಗಿದ್ದಾಗ 'ಇಂಡಿಯಾ' ಒಕ್ಕೂಟ ಮುನ್ನಡೆಸಲು ಸ್ಟಾಲಿನ್ಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ' ಎಂದು ಅವರು ಹೇಳಿದರು.
'ಬಲಿಷ್ಠ 'ಇಂಡಿಯಾ' ಒಕ್ಕೂಟ ಮಾತ್ರ 2029ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ. ಇದಿಲ್ಲದಿದ್ದರೆ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಲು ಸಾಧ್ಯವಿಲ್ಲ' ಎಂದೂ ಅವರು ಕಾರಣವನ್ನು ವಿವರಿಸಿದರು.
'ಮುಂಬರುವ ಚುನಾವಣೆ ಬಳಿಕ ಸ್ಟಾಲಿನ್ ಪುತ್ರ ಮತ್ತು ಅವರ ಸಹಚರರು ರಾಜ್ಯ ಸರ್ಕಾರವನ್ನು ಮುನ್ನಡೆಸುತ್ತಾರೆ. ಸ್ಟಾಲಿನ್ ಅವರು ಮಾತ್ರ ರಾಷ್ಟ್ರಮಟ್ಟದಲ್ಲಿ ಒಕ್ಕೂಟವನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ' ಎಂದು ಹೇಳಿದರು.
'ಕಳೆದ ಕೆಲವು ವರ್ಷಗಳಿಂದ ಡಿಎಂಕೆಯು ಕಾಂಗ್ರೆಸ್ನ ವಿಶ್ವಾಸಾರ್ಹ ಮಿತ್ರಪಕ್ಷವಾಗಿದೆ. ತಾವೊಬ್ಬ ಅಸಾಧಾರಣ ಆಡಳಿತಗಾರ ಎಂಬುದನ್ನು ಸ್ಟಾಲಿನ್ ಸಾಬೀತುಪಡಿಸಿದ್ದಾರೆ. ಅವರೊಬ್ಬ ನಿಷ್ಕಳಂಕ ಜಾತ್ಯತೀತ ನಾಯಕ ಸಹ ಹೌದು. ಹೀಗಾಗಿ ಅವರ ಆಯ್ಕೆ ಸೂಕ್ತ' ಎಂದೂ ಹೇಳಿದರು.

