ಭಾರತವು ಜಲ, ನೆಲ ಹಾಗೂ ವಾಯು ಮಾರ್ಗಗಳನ್ನು ಒಳಗೊಂಡಂತೆ ಎಲ್ಲ ಮೂರು ರಂಗಗಳಲ್ಲೂ ಭಯೋತ್ಪಾದಕ ಬೆದರಿಕೆಯನ್ನು ಎದುರಿಸುತ್ತಿದ್ದು, ಇಂಧನ, ರೈಲ್ವೆ, ವಾಯುಯಾನ, ಬಂದರುಗಳು, ರಕ್ಷಣೆ, ಬಾಹ್ಯಾಕಾಶ ಮತ್ತು ಪರಮಾಣು ಇಂಧನ ಸೇರಿದಂತೆ ಭಾರತೀಯ ಆರ್ಥಿಕತೆಯ ಮಹತ್ವದ ಎಲ್ಲಾ ವಲಯಗಳನ್ನು ಭಯೋತ್ಪಾದಕರಿಂದ ರಕ್ಷಿಸಿಕೊಳ್ಳಲು ಅಗತ್ಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಈ ನೀತಿಯಲ್ಲಿ ಪ್ರತಿಪಾದಿಸಲಾಗಿದೆ.
ಇದಕ್ಕೂ ಮುನ್ನ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ವ್ಯೂಹತಂತ್ರವನ್ನು ಅಂತಿಮಗೊಳಿಸಲಾಗಿದ್ದು, ಅದನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುತ್ತದೆ ಎಂದು ವರದಿಯಾಗಿತ್ತು.
ಈ ನೀತಿಗೆ 'PRAHAAR' ಎಂದು ನಾಮಕರಣ ಮಾಡಲಾಗಿದ್ದು, ಕೇಂದ್ರ ಗೃಹ ಸಚಿವಾಲಯದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ನೀತಿಯಲ್ಲಿ, "ಭಾರತವು ಭಯೋತ್ಪಾದನೆಯನ್ನು ಯಾವುದೇ ನಿರ್ದಿಷ್ಟ ಧರ್ಮ, ಜನಾಂಗ, ರಾಷ್ಟ್ರೀಯತೆ ಅಥವಾ ನಾಗರಿಕತೆಗೆ ಸಂಪರ್ಕಿಸುವುದಿಲ್ಲ" ಎಂದು ಹೇಳಲಾಗಿದೆ.
ಭಾರತವು ಜಿಹಾದಿ ಭಯೋತ್ಪಾದನಾ ನೆಲೆಗಳಷ್ಟೇ ಅಲ್ಲದೆ, ಅವುಗಳ ಮುಖ್ಯ ಸಂಘಟನೆಗಳು ಗಡಿಯ ಹೊರಗಿನಿಂದ ನಡೆಸುತ್ತಿರುವ ಪ್ರಾಯೋಜಿತ ಭಯೋತ್ಪಾದನೆಯಿಂದ ನಿರಂತರವಾಗಿ ತೊಂದರೆಗೀಡಾಗಿದ್ದು, ಈ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ದಾಳಿಗಳ ಯೋಜನೆ, ಸಮನ್ವಯ ಹಾಗೂ ನೆರವು ಒದಗಿಸುವುದನ್ನು ಮುಂದುವರಿಸಿವೆ ಎಂದೂ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

