HEALTH TIPS

ಸತ್ಯಮೇವ ಜಯತೇ: ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಆರೋಪ ಮುಕ್ತ: ದಿಲ್ಲಿ ಅಬಕಾರಿ ನೀತಿ ಹಗರಣ ಆರೋಪದಿಂದ ಖುಲಾಸೆವರೆಗೆ ಏನೇನಾಯ್ತು?

ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ರೌಸ್‌ ಅವೆನ್ಯೂ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. ಸಾಕ್ಷ್ಯಾಧಾರಗಳ ಕೊರತೆ ಮತ್ತು ಆರೋಪಪಟ್ಟಿಯಲ್ಲಿ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಇತರ 21 ಜನರನ್ನು ಖುಲಾಸೆಗೊಳಿಸಿ ರೌಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್‌ ಅವರು ಆದೇಶ ಪ್ರಕಟಿಸಿದ್ದಾರೆ.

ಗಂಭೀರ ಆರೋಪಗಳನ್ನು ವಸ್ತುನಿಷ್ಠ ಸಾಕ್ಷ್ಯಗಳಿಂದ ಬೆಂಬಲಿಸಬೇಕು. ಕೇಂದ್ರ ಪಿತೂರಿಯ ಪಾತ್ರದ ಆರೋಪವನ್ನು ದಾಖಲೆಯಲ್ಲಿ ಉಳಿಸಿಕೊಳ್ಳಲಾಗುವುದಿಲ್ಲ. ಪ್ರಾಸಿಕ್ಯೂಷನ್ ಆರೋಪಗಳು ವಸ್ತುನಿಷ್ಠವಾಗಿ ಬೆಂಬಲಿತವಾಗಿಲ್ಲ ಎಂದು ಕಂಡುಬಂದರೆ ಉನ್ನತ ಹುದ್ದೆಯಲ್ಲಿ ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಅಬಕಾರಿ ನೀತಿಯ ಹಿಂದೆ ಯಾವುದೇ ವ್ಯಾಪಕ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶವಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ತನಿಖಾ ದಳ (CBI) ಈ ಪ್ರಕರಣ ಕುರಿತು ತನಿಖೆ ನಡೆಸಿತ್ತು. ಪ್ರಕರಣ ದಾಖಲಾಗಿದ್ದ ವೇಳೆ ಅರವಿಂದ್ ಕೇಜ್ರಿವಾಲ್ ದಿಲ್ಲಿ ಸಿಎಂ, ಸಿಸೋಡಿಯಾ ಅವರು ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಫೆಬ್ರವರಿ 12ರಂದು ಸಿಬಿಐ, ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಇತರ 21 ಆರೋಪಿಗಳಿಂದ ವಿವರವಾದ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

ತನಿಖೆಯಲ್ಲಿನ ಲೋಪಗಳಿಗಾಗಿ ವಿಶೇಷ ನ್ಯಾಯಾಧೀಶ ಜಿತೇಂದರ್ ಸಿಂಗ್ ಕೇಂದ್ರ ತನಿಖಾ ದಳವನ್ನು ತರಾಟೆಗೆ ತೆಗೆದುಕೊಂಡರು."ಬೃಹತ್ ಆರೋಪಪಟ್ಟಿ"ಯಲ್ಲಿ ಯಾವುದೇ ಸಾಕ್ಷಿ ಅಥವಾ ಹೇಳಿಕೆಯಿಂದ ಬೆಂಬಲಿಸದ ಹಲವು ದೋಷಗಳಿವೆ ಎಂದು ಅವರು ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.

ಯಾವುದೇ ಸ್ಪಷ್ಟವಾದ ಸಾಕ್ಷ್ಯಗಳಿಲ್ಲದೆ ಕೇಜ್ರಿವಾಲ್ ಅವರನ್ನು ದೋಷಾರೋಪಣೆ ಮಾಡಲಾಗಿದೆ. ಇದು ಕಾನೂನಿನ ಆಳ್ವಿಕೆಯ ಬಗ್ಗೆ, ವಿಶೇಷವಾಗಿ ಸಾಂವಿಧಾನಿಕ ಪಾತ್ರದಲ್ಲಿರುವ ಯಾರಿಗಾದರೂ ಕಳವಳವನ್ನುಂಟುಮಾಡುತ್ತದೆ. ಆಪಾದಿತ ಪಿತೂರಿಯೊಂದಿಗೆ ಕೇಜ್ರಿವಾಲ್ ಅವರನ್ನು ಸಂಪರ್ಕಿಸುವ ಯಾವುದೇ ಮೂಲಭೂತ ವಸ್ತುಗಳು ಅಥವಾ ಪುರಾವೆಗಳಿಲ್ಲ.ಇದರಿಂದಾಗಿ ಅವರ ವಿರುದ್ಧದ ಆರೋಪಗಳನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ.

ಅಬಕಾರಿ ನೀತಿಯನ್ನು ಮೇಲ್ವಿಚಾರಣೆ ಮಾಡಿದ ಆರೋಪ ಹೊತ್ತಿರುವ ಸಿಸೋಡಿಯಾ ಅವರನ್ನು ಆಪಾದಿತ ತಪ್ಪುಗಳಿಗೆ ಲಿಂಕ್ ಮಾಡುವ ಯಾವುದೇ ಪುರಾವೆಗಳು ನ್ಯಾಯಾಲಯಕ್ಕೆ ಕಂಡುಬಂದಿಲ್ಲ. ಅವರಿಂದ ಯಾವುದೇ ಅಪರಾಧ ಸಾಮಗ್ರಿಗಳು ಅಥವಾ ಅಪರಾಧದ ಆದಾಯವನ್ನು ವಸೂಲಿ ಮಾಡಲಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ

ಭಾವುಕರಾದ ಕೇಜ್ರಿವಾಲ್

ಕಳೆದ ಕೆಲವು ವರ್ಷಗಳಿಂದ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಿಜೆಪಿ ನಮ್ಮ ಮೇಲೆ ಆರೋಪ ಮಾಡುತ್ತಿತ್ತು. ಇಂದು ನ್ಯಾಯಾಲಯವು ನಮ್ಮ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ. ಸತ್ಯ ಗೆಲ್ಲುತ್ತದೆ ಎಂದು ನಾವು ಯಾವಾಗಲೂ ಹೇಳುತ್ತಲೇ ಬಂದಿದ್ದೇವೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಎಪಿ ವಿರುದ್ಧ ಪಿತೂರಿ ನಡೆಸಿ ಪಕ್ಷದ ಐದು ದೊಡ್ಡ ನಾಯಕರನ್ನು ಬಂಧಿಸಿದರು. ಅವರು ಎಎಪಿಯನ್ನು ಮುಗಿಸಲು ಬಯಸಿದ್ದರು. ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಲಾಯಿತು. ಇದು ಭಾರತದಲ್ಲಿ ಎಂದಿಗೂ ಸಂಭವಿಸಿರಲಿಲ್ಲ ಎಂದು ರೌಸ್ ಅವೆನ್ಯೂ ನ್ಯಾಯಾಲಯದ ಹೊರಗೆ ಸುದ್ದಿಗಾರರರೊಂದಿಗೆ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ

ನಮ್ಮ ಮೇಲೆ ಆರೋಪ ಹೊರಿಸಲಾಯಿತು ಮತ್ತು ಪ್ರತಿ ಚಾನೆಲ್‌ನಲ್ಲಿಯೂ ನಮ್ಮನ್ನು ಭ್ರಷ್ಟ ಎಂದು ಕರೆಯಲಾಯಿತು. ಕೇಜ್ರಿವಾಲ್ ಭ್ರಷ್ಟ ಅಲ್ಲ .ನಾನು ಪ್ರಾಮಾಣಿಕತೆಯನ್ನು ಮಾತ್ರ ಗಳಿಸಿದ್ದೇನೆ. ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಎಎಪಿ ಪ್ರಾಮಾಣಿಕರು ಎಂದು ನ್ಯಾಯಾಲಯ ಇಂದು ಹೇಳಿದೆ. ನ್ಯಾಯಾಲಯದ ಆದೇಶವು ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವು 'ಕಟ್ಟರ್ ಇಮಾಂದರ್' (ಅಪ್ಪಟ ಪ್ರಾಮಾಣಿಕ) ಎಂದು ಸಾಬೀತುಪಡಿಸುತ್ತದೆ ಎಂದು ಹೇಳಿ ಕೇಜ್ರಿವಾಲ್ ಭಾವುಕರಾಗಿದ್ದಾರೆ

56 ದಿನಗಳ ಜೈಲುವಾಸದ ನಂತರ ಸಿಬಿಐ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ 2024 ಸೆಪ್ಟೆಂಬರ್ 13ರಂದು ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಜಾರಿ ನಿರ್ದೇಶನಾಲಯ (ED) ಪ್ರಕರಣದಲ್ಲಿ ಅವರು ಮಧ್ಯಂತರ ಜಾಮೀನು ಪಡೆದಿದ್ದರು.

2023 ಫೆಬ್ರವರಿ 26ರಂದು ಸಿಬಿಐ ಮತ್ತು 2023 ಮಾರ್ಚ್ 9ರಂದು ಇಡಿಯಿಂದ ಬಂಧನಕ್ಕೊಳಗಾದ ನಂತರ ಸಿಸೋಡಿಯಾ ಸುಮಾರು 530 ದಿನಗಳ ಕಾಲ ಜೈಲಿನಲ್ಲಿದ್ದರು.

ಖುಲಾಸೆಯಾದ ಇತರ ಆರೋಪಿಗಳು:

ಕುಲ್ದೀಪ್ ಸಿಂಗ್, ನರೇಂದರ್ ಸಿಂಗ್, ವಿಜಯ್ ನಾಯರ್, ಅಭಿಷೇಕ್ ಬೋಯಿನ್‌ಪಲ್ಲಿ, ಅರುಣ್ ಪಿಳ್ಳೈ, ಮೂತ ಗೌತಮ್, ಸಮೀರ್ ಮಹೇಂದ್ರು, ಮನೀಶ್ ಸಿಸೋಡಿಯಾ, ಅಮನ್‌ದೀಪ್ ಸಿಂಗ್ ಧಾಲ್, ಅರ್ಜುನ್ ಪಾಂಡೆ, ಬುಚ್ಚಿಬಾಬು ಗೋರಂಟ್ಲಾ, ರಾಜೇಶ್ ಜೋಶಿ, ದಾಮೋದರ್ ಪ್ರಸಾದ್ ಶರ್ಮಾ, ಪ್ರಿನ್ಸ್ ಕುಮಾರ್, ಅರವಿಂದ್ ಕುಮಾರ್ ಸಿಂಗ್, ಚಾನ್‌ಪ್ರೀತ್ ಸಿಂಗ್, ಕೆ. ಕವಿತಾ, ದುರ್ಗೇಶ್ ಪಾಠಕ್, ಅಮಿತ್ ಅರೋರಾ, ವಿನೋದ್ ಚೌಹಾಣ್, ಆಶಿಶ್ ಚಂದ್ ಮಾಥುರ್ ಮತ್ತು ಶರತ್ ರೆಡ್ಡಿ.

ಅಬಕಾರಿ ನೀತಿ ಹಗರಣ ಪ್ರಕರಣ:

ದಿಲ್ಲಿ ಸರ್ಕಾರವು 2021 ರಲ್ಲಿ ಪರಿಷ್ಕೃತ ಅಬಕಾರಿ ನೀತಿಯನ್ನು ಪರಿಚಯಿಸಿದ್ದು ಇದು ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಮದ್ಯ ವ್ಯಾಪಾರವನ್ನು ಸುಧಾರಿಸುತ್ತದೆ ಎಂದು ಹೇಳಿತು. ಈ ನೀತಿಯು ಖಾಸಗಿ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು. ಆದಾಗ್ಯೂ, ಅಕ್ರಮಗಳ ಆರೋಪದ ನಂತರ ಅಬಕಾರಿ ನೀತಿಯನ್ನು ಹಿಂತೆಗೆದುಕೊಳ್ಳಲಾಯಿತು. ನಂತರ ಲೆಫ್ಟಿನೆಂಟ್-ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಸಿಬಿಐ ತನಿಖೆಗೆ ಆದೇಶಿಸಿದರು. ಕೇಂದ್ರ ಸಂಸ್ಥೆಗಳು ಇಡಿ ಮತ್ತು ಸಿಬಿಐ ಈ ನೀತಿಯು ಕೆಲವು ಸಂಸ್ಥೆಗಳಿಗೆ ಅನುಕೂಲಕರವಾಗಿದೆ. ಇದು ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ, ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರರನ್ನು ಬಂಧಿಸಲಾಯಿತು . ಈ ಆರೋಪಗಳನ್ನು ಆರೋಪಿಗಳು ನಿರಾಕರಿಸುತ್ತಲೇ ಬಂದಿದ್ದರು.

ಅಬಕಾರಿ ನೀತಿ ಪ್ರಕರಣದ ಟೈಮ್ ಲೈನ್:

ಅಕ್ಟೋಬರ್ 2023: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಆಗಿನ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮೊದಲ ಸಮನ್ಸ್ ನೀಡಿತ್ತು

ನವೆಂಬರ್ 2, 2023: ಕೇಜ್ರಿವಾಲ್ ಮೊದಲ ಇಡಿ ಸಮನ್ಸ್ ತಪ್ಪಿಸಿಕೊಂಡು ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ಭಾಗವಹಿಸಿದರು.

ಡಿಸೆಂಬರ್ 2023: ಕೇಜ್ರಿವಾಲ್ ಗೆ ಎರಡನೇ ಬಾರಿ ಇಡಿ ಸಮನ್ಸ್ ನೀಡಿತ್ತು. ಅದನ್ನು "ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ" ಎಂದು ಹೇಳಿ ಕೇಜ್ರಿವಾಲ್ ಹಾಜರಾಗಲಿಲ್ಲ

ಜನವರಿ 2024: ಇಡಿಯಿಂದ ಮೂರನೇ ಸಮನ್ಸ್ ಬಂದಾಗ ಅದನ್ನು ಕೇಂದ್ರದ ಪಿತೂರಿ ಎಂದಿದ್ದರು ಕೇಜ್ರಿವಾಲ್

ಜನವರಿ 18, 2024: ನಾಲ್ಕನೇ ಸಮನ್ಸ್ ಜಾರಿ ಮಾಡಿದ ಇಡಿ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಗೆ ಆದೇಶಿಸಿತು.

ಫೆಬ್ರವರಿ 2, 2024: ಈಡಿ ಕಳುಹಿಸಿದ ಐದನೇ ಮತ್ತು ಆರನೇ ಸಮನ್ಸ್‌ಗೂ ಕೇಜ್ರಿವಾಲ್ ಗೈರುಹಾಜರಾದರು.

ಮಾರ್ಚ್ 16, 2024: ಸಮನ್ಸ್‌ಗೆ ಹಾಜರಾಗದಿದ್ದಕ್ಕಾಗಿ ಈಡಿ ಸಲ್ಲಿಸಿದ ಎರಡು ದೂರುಗಳ ಮೇಲೆ ಸೆಷನ್ಸ್ ನ್ಯಾಯಾಲಯವು ಕೇಜ್ರಿವಾಲ್‌ಗೆ ಜಾಮೀನು ನೀಡಿತು.

ಮಾರ್ಚ್ 21, 2024: ಬಲವಂತದ ಕ್ರಮದಿಂದ ರಕ್ಷಣೆ ನಿರಾಕರಿಸಿದ ದಿಲ್ಲಿ ಹೈಕೋರ್ಟ್‌ನಲ್ಲಿ ಈಡಿ ಸಮನ್ಸ್ ಅನ್ನು ಕೇಜ್ರಿವಾಲ್ ಪ್ರಶ್ನಿಸಿದರು.

ಮಾರ್ಚ್ 21, 2024: ಬಲವಂತದ ಕ್ರಮದಿಂದ ರಕ್ಷಣೆಗಾಗಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಒಂಬತ್ತು ಇಡಿ ಸಮನ್ಸ್‌ಗಳನ್ನು ತಪ್ಪಿಸಿಕೊಂಡ ನಂತರ, ಕೇಜ್ರಿವಾಲ್ ಅವರನ್ನು ಈಡಿ ಬಂಧಿಸಿತು

ಮೇ 10, 2024: ಸುಪ್ರೀಂ ಕೋರ್ಟ್ ಜೂನ್ 1 ರವರೆಗೆ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ, ಲೋಕಸಭಾ ಚುನಾವಣೆಗೆ ಪ್ರಚಾರ ಮಾಡಲು ಅವಕಾಶ ನೀಡಿತು.

ಜೂನ್ 1, 2024: ದಿಲ್ಲಿ ನ್ಯಾಯಾಲಯದಲ್ಲಿ ಕೇಜ್ರಿವಾಲ್ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದರು.

ಜೂನ್ 2, 2024: ಸುಪ್ರೀಂ ಕೋರ್ಟ್ ಆದೇಶದಂತೆ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿ ಶರಣಾದರು.

ಜೂನ್ 5, 2024: ವೈದ್ಯಕೀಯ ಕಾರಣಗಳಿಗಾಗಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ದಿಲ್ಲಿ ನ್ಯಾಯಾಲಯ ತಿರಸ್ಕರಿಸಿತು.

ಜೂನ್ 20, 2024: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯವು ಕೇಜ್ರಿವಾಲ್‌ಗೆ ಜಾಮೀನು ನೀಡಿತು.

ಜೂನ್ 21, 2024: ದಿಲ್ಲಿ ಹೈಕೋರ್ಟ್‌ಗೆ ಈಡಿ ಮೇಲ್ಮನವಿ ಸಲ್ಲಿಸಿತು. ಅದು ಕೇಜ್ರಿವಾಲ್ ಬಿಡುಗಡೆಯನ್ನು ತಡೆಯಿತು.

ಜೂನ್ 26, 2024: ಸಿಬಿಐನಿಂದ ಕೇಜ್ರಿವಾಲ್ ಬಂಧನ.

ಸೆಪ್ಟೆಂಬರ್ 5, 2024: ಕೇಜ್ರಿವಾಲ್ ಬಂಧನ ಮತ್ತು ದೆಹಲಿ ಹೈಕೋರ್ಟ್ ಜಾಮೀನು ನಿರಾಕರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಜಾಮೀನು ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು

ಸೆಪ್ಟೆಂಬರ್ 13, 2024: ಕೇಜ್ರಿವಾಲ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಜನವರಿ 22, 2026: ದಿಲ್ಲಿ ನ್ಯಾಯಾಲಯವು ಎರಡು ಈಡಿ ಪ್ರಕರಣಗಳಲ್ಲಿ ಅವರನ್ನು ಖುಲಾಸೆಗೊಳಿಸಿತ್ತು.

ಫೆಬ್ರವರಿ 27, 2026: ದಿಲ್ಲಿ ನ್ಯಾಯಾಲಯದಿಂದ ಕೇಜ್ರಿವಾಲ್‌ಗೆ ಕ್ಲೀನ್ ಚಿಟ್

ಸತ್ಯ ಯಾವತ್ತೂ ಗೆಲ್ಲುತ್ತೆ: ಸುನೀತಾ ಕೇಜ್ರಿವಾಲ್

ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಎಲ್ಲಾ ಆರೋಪಗಳಿಂದ ಮುಕ್ತರಾದ ನಂತರ ಸತ್ಯ ಯಾವಾಗಲೂ ಗೆಲ್ಲುತ್ತೆ ಎಂದು ಕೇಜ್ರಿವಾಲ್ ಪತ್ನಿ , ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕಿ ಸುನೀತಾ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

"ಈ ಜಗತ್ತಿನಲ್ಲಿ, ಒಬ್ಬರು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಶಿವಶಕ್ತಿಗಿಂತ ಮೇಲೇರಲು ಸಾಧ್ಯವಿಲ್ಲ. ಸತ್ಯ ಯಾವಾಗಲೂ ಗೆಲುವು ಸಾಧಿಸುತ್ತದೆ" ಎಂದು ಸುನೀತಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೇಲ್ಮನವಿ ಸಲ್ಲಿಸಲಿದೆ ಸಿಬಿಐ:

2022 ರ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಇತರರನ್ನು ಖುಲಾಸೆಗೊಳಿಸಿದ ನ್ಯಾಯಾಲಯದ ಆದೇಶದ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಲಿದೆ. ಸಂಸ್ಥೆಯು ಆದೇಶವನ್ನು ಅಧ್ಯಯನ ಮಾಡುವ ಪ್ರಕ್ರಿಯೆಯಲ್ಲಿದೆ. ಆದಷ್ಟು ಬೇಗ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries