ಬದಿಯಡ್ಕ: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಶಾಸ್ತ್ರೀಯ ನೃತ್ಯ ಕಲಾವಿದರ ಸಂಘಟನೆ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಮಂಗಳೂರು ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಎಡನೀರು ಮಠದ ಭಾರತೀ ಕಲಾಸದನದಲ್ಲಿ ಮಾ.15 ಭಾನುವಾರ ಬೆಳಗ್ಗೆ 10 ರಿಂದ ಭರತಮುನಿ ಜಯಂತಿ ಕಾರ್ಯಕ್ರಮ ಜರಗಲಿರುವುದು. ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಪ್ರಜ್ವಲನೆಗೈದು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಅಧ್ಯಕ್ಷೆ ವಿದುಷಿ ರಾಜಶ್ರೀ ಉಳ್ಳಾಲ ಸಭಾಧ್ಯಕ್ಷತೆ ವಹಿಸುವರು. ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಕೆರೆಮನೆ ಶಿವಾನಂದ ಹೆಗಡೆ ಅಭ್ಯಾಗತರಾಗಿ ಪಾಲ್ಗೊಳ್ಳುವರು.
ನಾಟ್ಯರಂಗ ಪುತ್ತೂರು ಕಲಾನಿರ್ದೇಶಕರಾದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ನುಡಿನಮನ ಸಲ್ಲಿಸಲಿದ್ದಾರೆ. ಹಿರಿಯ ಕಲಾವಿದೆ ಕಾಸರಗೋಡು ನೃತ್ಯನಿಕೇತನದ ನಿರ್ದೇಶಕರಾದ ನೃತ್ಯಗುರು ವಿದುಷಿ ಶಶಿಕಲಾ ಟೀಚರ್ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ಬೆಳಗ್ಗೆ 11 ರಿಂದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು, ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪುತ್ತೂರು, ವಿದುಷಿ ಕಾವ್ಯ ಭಟ್ ಪೆರ್ಲ, ವಿದುಷಿ ಸವಿತಾ ಜೀವನ್ ಕೊಂಡೆವೂರು ಉಪ್ಪಳ, ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಇವರ ನಿರ್ದೇಶನದಲ್ಲಿ ನಾಟ್ಯಾರ್ಚನೆ-ಸಮೂಹ ನೃತ್ಯ ಪ್ರದರ್ಶನಗೊಳ್ಳಲಿದೆ. ಅಪರಾಹ್ನ 2 ರಿಂದ ಡಾ. ಸತ್ಯನಾರಾಯಣ ರಾಜು ಇವರ ಶಿಷ್ಯೆ ವಿದುಷಿ ಗೌರಿ ಸಾಗರ್ ಬೆಂಗಳೂರು ಇವರಿಂದ ಭರತನಾಟ್ಯ ಪ್ರಸ್ತುತಿ ಶ್ರೀ ವಿನೋದ, 3.15 ರಿಂದ `ಕುಚೇಲ ವ್ರತಂ' ಕಥಕ್ಕಳಿ ಪ್ರದರ್ಶನ ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕಕಥಕ್ಕಳಿ ಟ್ರಸ್ಟ್ ಬೇಕಲ ಕಾಸರಗೋಡು ಇವರ ಸಂಯೋಜನೆಯಲ್ಲಿ ವಿದುಷಿ ಮೃದುಲಾ ಹರೀಶ್ ಇವರ ಸಹಪ್ರಾಯೋಜಕತ್ವದಲ್ಲಿ ನಡೆಯಲಿದೆ.



