ಕಾಸರಗೋಡು: ಕಿರಿಯ ವಕೀಲರಿಗೆ ಘೋಷಿಸಲಾಗಿರುವ ಮಾಸಿಕ 5000 ರೂ.ಗಳ ಸ್ಟೈಫಂಡ್ ಅನ್ನು ತಕ್ಷಣ ವಿತರಿಸಬೇಕು ಎಂದು ಭಾರತೀಯ ವಕೀಲರ ಪರಿಷತ್ ಜಾಸರಗೋಡು ಜಿಲ್ಲಾ ಸಮ್ಮೇಳನ ಸರ್ಕಾರವನ್ನು ಆಗ್ರಹಿಸಿದೆ.
ಕಾಸರಗೋಡು ಟೌನ್ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮ್ಮೇಳನದಲ್ಲಿ ಸಂಘಟನೆ ರಾಜ್ಯ ಕಾರ್ಯದರ್ಶಿ ಸಂದೀಪ್ ಕುಮಾರ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎ.ಸಿ.ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ವಕೀಲಿ ವೃತ್ತಿಯಲ್ಲಿ 25 ರೂ.ಗಳ ಸ್ಟೈಫಂಡ್ ಸ್ಟಾಂಪ್ ಅನ್ನು ಕಡ್ಡಾಯಗೊಳಿಸುವುದರ ಜತೆಗೆ ಕಲ್ಯಾಣ ನಿಧಿ ಸ್ಟಾಂಪ್ ಅನ್ನು 25 ರೂ.ಗಳಿಂದ 100 ರೂ.ಗಳಿಗೆ ಹೆಚ್ಚಿಸುವ ಮೂಲಕ ವಕೀಲರ ಮೇಲೆ ಹೆಚ್ಚಿನ ಹೊರೆಯನ್ನು ಹೇರಲಾಗಿದೆ. ಕಾನೂನು ಲಾಭ ನಿಧಿ ಸ್ಟ್ಯಾಂಪಿನನಲ್ಲಿ ಬರುವ ಬೃಹತ್ ಮೊತ್ತವನ್ನು ಬಡ್ಡಿ ರಹಿತವಾಗಿ ಸರ್ಕಾರಿ ಖಜಾನೆ ಖಾತೆಗೆ ವರ್ಗಾಯಿಸಲಾಗುತ್ತಿದೆ. ಸರ್ಕಾರವು ಈ ಮೊತ್ತಕ್ಕೆ ಸಮಂಜಸವಾದ ಬಡ್ಡಿಯನ್ನು ಪಾವತಿಸುವುದರ ಜತೆಗೆ ಈ ಮೊತ್ತವನ್ನು ಸ್ಟೈಫಂಡ್ ನೀಡಲು ಬಳಸಬೇಕೆಂದು ಮತ್ತು ಅನ್ಯಾಯದ ಶುಲ್ಕ ಹೆಚ್ಚಳವನ್ನು ಹಿಂಪಡೆಯಬೇಕೆಂದು ಸಮ್ಮೇಳನವು ಒತ್ತಾಯಿಸಿತು.
ರಾಜ್ಯ ಉಪಾಧ್ಯಕ್ಷ ಬಿ.ರವೀಂದ್ರನ್, ಕರುಣಾಕರನ್ ನಂಬಿಯಾರ್, ಪಿ.ಮುರಳೀಧರನ್, ಕುಸುಮಾ ಎಂ, ಅನಿಲ್ ಕೆ.ಜಿ., ಹರ್ಷಿತಾ, ಬೀನಾ ಕೆ.ಎಂ., ಗಿರೀಶ್ರಾವ್ ಮೊದಲಾದವರು ಉಪಸ್ಥಿತರಿದ್ದರು. ನವೀನ್ ರಾಜ್ ಸ್ವಾಗತಿಸಿದರು. ಎ. ಮಣಿಕಂದನ್ ವಂದಿಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷ, ನವೀನ್ ರಾಜ್ ಕೆ.ಜೆ. ಪ್ರಧಾನ ಕಾರ್ಯದರ್ಶಿ, ಹರ್ಷಿತಾ ಕೋಶಾಧಿಕಾರಿ, ಅನಂತರಾಮ್ ಪಿ, ಅನಿಲ್ ಕೆ.ಜಿ., . ಕುಸುಮಾ ಎಂ ಉಪಾಧ್ಯಕ್ಷರು, ಸಚಿನ್ ಶೆಣೈ, ಪ್ರಜಿತ್ ಎಸ್.ಕೆ. ಹಾಗೂ ಅಕ್ಷತಾ ಮನೋಜ್ ಅವರನ್ನು ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಯಿತು.

