ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷವೂ ಸೇರಿದಂತೆ ಜಾಗತಿಕವಾಗಿ ಎದುರಾಗುವ ಆರ್ಥಿಕ ಅಡೆತಡೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ₹1 ಲಕ್ಷ ಕೋಟಿ ಮೊತ್ತದ 'ಆರ್ಥಿಕ ಸ್ಥಿರೀಕರಣ ನಿಧಿ' ಸ್ಥಾಪಿಸುವ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು.
'ಪ್ರಸ್ತಾವಿತ ನಿಧಿಯು ಇತ್ತೀಚಿನ ಬಿಕ್ಕಟ್ಟು ಮತ್ತು ಅನಿರೀಕ್ಷಿತವಾಗಿ ಬರಬಹುದಾದ ಜಾಗತಿಕ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಲು ಭಾರತಕ್ಕೆ ನೆರವಾಗುತ್ತದೆ' ಎಂದು ಅವರು ಲೋಕಸಭೆಯಲ್ಲಿ ತಿಳಿಸಿದರು.
ಅನುದಾನಕ್ಕಾಗಿ ಎರಡನೇ ಹಂತದ ಪೂರಕ ಬೇಡಿಕೆಗಳ ಕುರಿತು ಚರ್ಚಿಸುವಾಗ ಅವರು ಈ ಕುರಿತು ಮಾಹಿತಿ ನೀಡಿದರು.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದ ಎದುರಾಗಿರುವ ಇಂಧನ ಪೂರೈಕೆ ಸಮಸ್ಯೆ ಮತ್ತು ಅಡುಗೆ ಅನಿಲ ಕೊರತೆ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ವೇಳೆಯೇ ನಿರ್ಮಲಾ ಅವರು ಇದನ್ನು ಪ್ರಸ್ತಾಪಿಸಿರು.
ಪೂರಕ ಬೇಡಿಕೆಗಳ ಭಾಗವಾಗಿ ಈ ನಿಧಿಗೆ ಬಳಸಲು ₹57,381.84 ಕೋಟಿ ಅನುದಾನಕ್ಕೆ ಸಂಸತ್ತಿನ ಅನುಮೋದನೆಯನ್ನು ಸರ್ಕಾರ ಕೋರಿತು. ಉಳಿದ ಮೊತ್ತವನ್ನು ಇತರ ಸಚಿವಾಲಯಗಳು ಮತ್ತು ಇಲಾಖೆಗಳ ಉಳಿತಾಯದ ಮೂಲಕ ಪಡೆಯಲಾಗುವುದು ಎಂದು ಹೇಳಿತು.
₹2.81 ಲಕ್ಷ ಕೋಟಿಗೆ ಪೂರಕ ಬೇಡಿಕೆ: ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಪೂರಕ ಬೇಡಿಕೆಗಳ ಮೂಲಕ ಸರ್ಕಾರ ಒಟ್ಟು ₹2.81 ಲಕ್ಷ ಕೋಟಿ ಖರ್ಚು ಮಾಡಲು ಲೋಕಸಭೆಯ ಅನುಮೋದನೆ ಕೋರಿತು.
ಈಗಾಗಲೇ ಈ ಸಾಲಿನ ಬಜೆಟ್ನಲ್ಲಿ ₹80 ಸಾವಿರ ಕೋಟಿ ಕೋರಿಕೆ ಸಲ್ಲಿಸಲಾಗಿದ್ದು, ಹೆಚ್ಚುವರಿಯಾಗಿ 2.01 ಲಕ್ಷ ಕೊಟಿಗೆ ಅನುಮತಿ ಕೋರಲಾಗಿದೆ ಎಂದು ಸಚಿವರು ತಿಳಿಸಿದರು.
ಪೂರಕ ಬೇಡಿಕೆಗಳಲ್ಲಿ ₹1 ಲಕ್ಷ ಕೊಟಿ ಮೊತ್ತದ ಆರ್ಥಿಕ ಸ್ಥಿರೀಕರಣ ನಿಧಿ ಸ್ಥಾಪನೆಗೆ ಅನುದಾನವನ್ನೂ ಕೋರಲಾಗಿದೆ. ರಕ್ಷಣಾ ಸಚಿವಾಲಯಕ್ಕೆ ₹41,822 ಕೋಟಿ, ರಸಗೊಬ್ಬರ ಸಬ್ಸಿಡಿಗೆ ₹19,230 ಕೋಟಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ ₹23,641 ಕೋಟಿ ಹೆಚ್ಚುವರಿ ವೆಚ್ಚಕ್ಕಾಗಿ ಸಂಸತ್ತಿನ ಅನುಮೋದನೆ ಕೋರಲಾಗಿದೆ ಎಂದು ನಿರ್ಮಲಾ ವಿವರಿಸಿದರು.
ಪ್ರಸಕ್ತ ಆರ್ಥಿಕ ವರ್ಷದ (2025-26) ಹಣಕಾಸು ಕೊರತೆಯು ಪರಿಷ್ಕೃತ ಅಂದಾಜು ಮಿತಿಯೊಳಗೇ ಇರುತ್ತದೆ ಎಂದರು. ಈ ಪ್ರಸ್ತಾವನೆಯು ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಪಡೆಯಿತು.
ಎಲ್ಪಿಜಿ: ದೇಶೀಯ ಉತ್ಪಾದನೆ ಶೇ 30ರಷ್ಟು ಹೆಚ್ಚು
ನವದೆಹಲಿ: ಗೃಹಬಳಕೆಗೆ ಅಡುಗೆ ಅನಿಲದ (ಎಲ್ಪಿಜಿ) ನಿರಂತರ ಪೂರೈಕೆಯನ್ನು ಖಚಿತಪಡಿಸಲಾಗಿದೆ. ಹೀಗಾಗಿ ಜನರು ಆತಂಕಗೊಂಡು ಸಿಲಿಂಡರ್ಗಳಿಗಾಗಿ ಬುಕಿಂಗ್ಗಳನ್ನು ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
ದೇಶೀಯವಾಗಿ ಎಲ್ಪಿಜಿ ಉತ್ಪಾದನೆಯು ಮಾರ್ಚ್ 5ರಿಂದ ಶೇ 30ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಎಲ್ಲೂ ಎಲ್ಪಿಜಿ ಕೊರತೆಯಿಲ್ಲ. ಯಾವುದೇ ಡೀಲರ್ಗಳ ಬಳಿ ಎಲ್ಪಿಜಿ 'ಡ್ರೈ ಔಟ್' ಆಗಿಲ್ಲ. ಹೀಗಾಗಿ ಜನ ಆತಂಕಕ್ಕೆ ಒಳಗಾಗಿ ಬುಕಿಂಗ್ ಮಾಡುವ ಅಗತ್ಯವಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಶ್ಚಿಮ ಏಷ್ಯಾದ ಸಂಘರ್ಷಕ್ಕೂ ಮುನ್ನ ಸರಾಸರಿ 55.7 ಲಕ್ಷ ಇದ್ದ 'ಬುಕಿಂಗ್' ಯುದ್ದ ಆರಂಭದ ಬಳಿಕ 75.7 ಲಕ್ಷಕ್ಕೆ ಹೆಚ್ಚಾಗಿದೆ. ಇದು ಜನರು ಆತಂಕಕ್ಕೆ ಒಳಗಾಗಿ 'ಬುಕಿಂಗ್' ಮಾಡಿರುವುದನ್ನು ತೋರಿಸುತ್ತದೆ ಎಂದು ಅವರು ವಿವರಿಸಿದರು. ಭಾರತಕ್ಕೆ ಹೆಚ್ಚಿನ ಪ್ರಮಾಣದ ಎಲ್ಪಿಜಿ ಹೊರ್ಮುಜ್ ಜಲಸಂಧಿ ಮೂಲಕ ಬರುತ್ತದೆ. ಹೀಗಾಗಿ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಭಾರತಕ್ಕೆ ತೀವ್ರ ಕಳವಕಾರಿಯಾಗಿದೆ.

