ಈ ವಿದ್ಯಾರ್ಥಿಗಳನ್ನು ಮಂಗಳವಾರ ಬೆಳಗ್ಗೆ ಬಸ್ಗಳಲ್ಲಿ ಕೋಮ್ ನಗರಕ್ಕೆ ಸಾಗಿಸಲಾಯಿತು. ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದವರು. ಅವರು ಟೆಹರಾನ್ನ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಶಾಹಿದ್ ಬಹೇಷ್ಟಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮತ್ತು ಟೆಹರಾನ್ನ ಇರಾನ್ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿದ್ದರು. ಕೆಲವು ಇಂಜಿನಿಯರಿಂಗ್ ವಿದ್ಯಾರ್ಥಿಗಳೂ ಇರಾನ್ನಲ್ಲಿ ಕಲಿಯುತ್ತಿದ್ದಾರೆ.
''ಟೆಹರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ವ್ಯವಸ್ಥೆಗಳನ್ನು ಮಾಡಿದೆ. ವಿದ್ಯಾರ್ಥಿಗಳನ್ನು ಐದು ಬಸ್ಗಳಲ್ಲಿ ಸಾಗಿಸಲಾಯಿತು. ಅವರು ಕೋಮ್ ನಗರವನ್ನು ಕ್ಷೇಮವಾಗಿ ತಲುಪಿದ್ದಾರೆ. ಇರಾನ್ನ ಇತರ ನಗರಗಳಲ್ಲಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ'' ಎಂದು ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಪ್ರತಿನಿಧಿ ಡಾ. ಮುಹಮ್ಮದ್ ಮುಮಿನ್ ಖಾನ್ ತಿಳಿಸಿದರು.
''ಟೆಹರಾನ್ನಲ್ಲಿ ನಮಗೆ ನಿರಂತರವಾಗಿ ಸ್ಫೋಟಗಳ ಸದ್ದು ಕೇಳುತ್ತಿತ್ತು. ನಾವು ಕೋಮ್ ತಲುಪಿದ್ದೇವೆ. ಈಗ ನಮಗೆ ಸುರಕ್ಷತೆಯ ಭಾವನೆ ಬರುತ್ತಿದೆ'' ಎಂದು ಸ್ಥಳಾಂತರಗೊಂಡವರ ಪೈಕಿ ಒಬ್ಬನಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿ ಸೈಯದ್ ಫಾಝಿಲ್ ಹೇಳಿದ್ದಾರೆ.
ಭಾರತ ಸರಕಾರ ಮಧ್ಯಪ್ರವೇಶ ಮಾಡಬೇಕೆಂದು ಸಂಘವು ಪದೇ ಪದೇ ಮನವಿ ಮಾಡಿತ್ತು. ಈಗ ಹೇಳಿಕೆಯೊಂದರಲ್ಲಿ, ಅದು ಭಾರತೀಯ ರಾಯಭಾರ ಕಚೇರಿಗೆ ಕೃತಜ್ಞತೆ ಸಲ್ಲಿಸಿದೆ.

