ಸುಮಾರು 5000 ಭಾರತೀಯ ರೋಗಿಗಳ ವೈದ್ಯಕೀಯ ವರದಿಗಳನ್ನು ವಿಶ್ಲೇಷಿಸಿ ಈ ಅಧ್ಯಯನ ನಡೆಸಲಾಗಿದೆ.
ಹೃದ್ರೋಗ ಅಪಾಯ ಸಾಧ್ಯತೆಯ ಜಾಗತಿಕ ಮನದಂಡಗಳು, ಈ ರೋಗಿಗಳ ಅಪಾಯ ಸಾಧ್ಯತೆಯನ್ನು ಪತ್ತೆ ಮಾಡಲು ವಿಫಲವಾಗಿರುವುದು ಅಧ್ಯಯನದಿಂದ ದೃಢಪಟ್ಟಿದೆ. ಅಧ್ಯಯನಕ್ಕೆ ಒಳಪಡಿಸಿದ ರೋಗಿಗಳ ಪೈಕಿ ಶೇಕಡ 80ರಷ್ಟು ಮಂದಿ, ಅತ್ಯಧಿಕ ಅಪಾಯ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ನೀಡುವ ಮುನ್ನವೇ ಮೊದಲ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ದೆಹಲಿಯ ಜಿಬಿ ಪಂತ್ ಆಸ್ಪತ್ರೆಯ ಡಾ.ಮೋಹಿತ್ ದಯಾಳ್ ಗುಪ್ತಾ ನೇತೃತ್ವದ ತಂಡ ಈ ಅಧ್ಯಯನ ನಡೆಸಿದೆ.
ಪಾಶ್ಚಿಮಾತ್ಯ ಮಾದರಿಗಳು ಭಾರತಕ್ಕೆ ನಿರ್ದಿಷ್ಟವಾಗಿರುವ ಅಪಾಯ ಸಾಧ್ಯತೆಯನ್ನು ಅಂದಾಜಿಸಲು ವಿಫಲವಾಗಿವೆ. ಅತ್ಯಧಿಕ ಅಪಾಯ ಸಾಧ್ಯತೆ ಇದ್ದರೂ ಈ ರೋಗಿಗಳಿಗೆ ಮಂದ ಅಥವಾ ಸಾಮಾನ್ಯ ಅಪಾಯ ಸಾಧ್ಯತೆ ಇದೆ ಎಂದು ನಿರ್ಧರಿಸಲಾಗಿತ್ತು ಎಂದು ಅಧ್ಯಯನ ಬಹಿರಂಗಪಡಿಸಿದೆ.
ಈ ಜಾಗತಿಕ ಮಾನದಂಡವನ್ನು ಆಧರಿಸಿ ವೈದ್ಯರು, ಯಾರಿಗೆ ತಕ್ಷಣದ ಚಿಕಿತ್ಸೆ ಅಗತ್ಯವಿದೆ ಎನ್ನುವುದನ್ನು ನಿರ್ಧರಿಸುತ್ಥಾರೆ. ಆದರೆ ಅಧ್ಯಯನದ ಪ್ರಕಾರ, ಅಪಾಯ ಸಾಧ್ಯತೆಯ ವರ್ಗಗಳನ್ನು ಪಾಶ್ಚಿಮಾತ್ಯ ಮಾದರಿಗಳು ತಪ್ಪು ಲೆಕ್ಕಾಚಾರ ಮಾಡಿವೆ. ಅತ್ಯಧಿಕ ಅಪಾಯ ಸಾಧ್ಯತೆಯ ಎಚ್ಚರಿಕೆ ನೀಡಲಾಗಿದ್ದ ಶೇಕಡ 11 ರಿಂದ 20ರಷ್ಟು ರೋಗಿಗಳು ಮಾತ್ರ ಕಾಲಾನುಕ್ರಮದಲ್ಲಿ ಹೃದ್ರೋಗಕ್ಕೆ ಬಲಿಯಾಗಿದ್ದಾರೆ.
"ಭಾರತೀಯ ರೋಗಿಗಳು ಮತ್ತು ಜನರ ನಡವಳಿಕೆ ಸಂಪೂರ್ಣ ಭಿನ್ನ. ನಮ್ಮಲ್ಲಿ ಅಪಾಯ ಸಾಧ್ಯತೆಯ ಅಂಶಗಳೂ ಭಿನ್ನ. ವಿಧಾನಗಳು ಕೂಡಾ ಭಿನ್ನ. ಆದ್ದರಿಂದ ಪಾಶ್ಚಿಮಾತ್ಯ ಅಂಕಗಳು ಸದಾ ಸಮರ್ಪಕ ಅಲ್ಲ" ಎಂದು ಡಾ.ಗುಪ್ತಾ ಪ್ರತಿಪಾದಿಸಿದ್ದಾರೆ.

