ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ 'ಭೀಕರ ಯುದ್ಧ'ದಿಂದಾಗಿ ಉದ್ಭವಿಸಿರುವ ಸವಾಲನ್ನು ನಿಭಾಯಿಸಲು ನಾಗರಿಕರು ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮನವಿ ಮಾಡಿದರು.
ಪ್ರಸ್ತುತ ಬಿಕ್ಕಟ್ಟನ್ನು ರಾಜಕೀಯಗೊಳಿಸುತ್ತಿರುವವರಿಗೆ 'ಮನದ ಮಾತು' ಬಾನುಲಿ ಕಾರ್ಯಕ್ರಮದಲ್ಲಿ ಎಚ್ಚರಿಕೆಯನ್ನು ನೀಡಿದ ಪ್ರಧಾನಿ, ದೇಶದ 140 ಕೋಟಿ ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ, ಸ್ವಾರ್ಥ ರಾಜಕಾರಣಕ್ಕೆ ಅವಕಾಶವಿಲ್ಲ ಎಂದರು.
'ವದಂತಿ ಹರಡುತ್ತಿರುವವರು ದೇಶಕ್ಕೆ ದೊಡ್ಡ ಹಾನಿ ಉಂಟು ಮಾಡುತ್ತಿದ್ದಾರೆ. ಜನರು ಜಾಗರೂಕರಾಗಿರಬೇಕು. ಸರ್ಕಾರ ನಿರಂತರವಾಗಿ ಒದಗಿಸುವ ಮಾಹಿತಿಯನ್ನು ಮಾತ್ರ ನಂಬಬೇಕು. ಒಗ್ಗಟ್ಟಿನ ಬಲದಿಂದ ಈ ಹಿಂದೆ ಎದುರಾದ ಬಿಕ್ಕಟ್ಟುಗಳನ್ನು ಜಯಿಸಿದಂತೆಯೇ ಇದನ್ನೂ ಎದುರಿಸೋಣ' ಎಂಬ ವಿಶ್ವಾಸದ ನುಡಿಗಳನ್ನಾಡಿದರು.
'ಪಶ್ಚಿಮ ಏಷ್ಯಾವು ಭಾರತದ ಇಂಧನ ಅಗತ್ಯಗಳ ಪ್ರಮುಖ ಕೇಂದ್ರ. ಇದೀಗ ಇಂಧನಕ್ಕೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಬಿಕ್ಕಟ್ಟು ಉದ್ಭವಿಸಿದೆ. ನಮ್ಮ ಜಾಗತಿಕ ಬಾಂಧವ್ಯ, ಕಳೆದ ದಶಕದ ಅವಧಿಯಲ್ಲಿ ನಾವೇ ನಿರ್ಮಿಸಿಕೊಂಡ ಸ್ವಸಾಮರ್ಥ್ಯವು ಈಗಿನ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಭಾರತಕ್ಕೆ ಅನುವು ಮಾಡಿಕೊಟ್ಟಿದೆ' ಎಂದಿದ್ದಾರೆ.
'ಭಾರತೀಯ ಕುಟುಂಬಗಳ ಒಂದು ಕೋಟಿಗೂ ಹೆಚ್ಚು ಮಂದಿ ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನೆರವು ನೀಡಿದ ಕೊಲ್ಲಿ ರಾಷ್ಟ್ರಗಳಿಗೆ ಕೃತಜ್ಞನಾಗಿರುವೆ' ಎಂದೂ ಪ್ರಧಾನಿ ಹೇಳಿದರು.
ಸಕ್ಕರೆ ಸೇವನೆ ಮಿತಗೊಳಿಸಿ:
ಸ್ಥೂಲಕಾಯ (ಬೊಜ್ಜು) ತಡೆಗಟ್ಟಬೇಕು ಎಂದರೆ ಸಕ್ಕರೆಯನ್ನು ಮಿತವಾಗಿ ತಿನ್ನಿ. ಅಡುಗೆ ಎಣ್ಣೆಯ ಬಳಕೆಯನ್ನು ಶೇ 10ರಷ್ಟು ಕಡಿಮೆ ಮಾಡಿ ಎಂದು ಮೋದಿ ಕಿವಿಮಾತು ಹೇಳಿದರು.
ಇಂತಹ ಸಣ್ಣ ಪ್ರಯತ್ನಗಳೇ ಜನರನ್ನು ಬೊಜ್ಜು ಮತ್ತು ಜೀವನಶೈಲಿ ಕಾಯಿಲೆಗಳಿಂದ ದೂರವಿರಿಸುತ್ತವೆ ಎಂದೂ ತಿಳಿಸಿದರು.
50 ಲಕ್ಷ ಘಟಕ:
'ಜಲ ಸಂಚಯ ಅಭಿಯಾನ'ದ ಅಡಿಯಲ್ಲಿ ದೇಶದಾದ್ಯಂತ ಸುಮಾರು 50 ಲಕ್ಷ ಮಳೆ ನೀರು ಸಂಗ್ರಹ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
'ಕಳೆದ 11 ವರ್ಷಗಳಲ್ಲಿ ಅಮೃತ್ ಸರೋವರ್ ಅಭಿಯಾನದಡಿ 70 ಸಾವಿರ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ' ಎಂದು ಇದೇ ಸಂದರ್ಭ ತಿಳಿಸಿದರು.
'ದೇಶದ ಹಲವು ಭಾಗಗಳಲ್ಲಿ ಬೇಸಿಗೆ ಆರಂಭವಾಗಿದ್ದು, ಜಲಸಂರಕ್ಷಣೆಯ ಬದ್ಧತೆಯನ್ನು ನವೀಕರಿಸುವ ಸಮಯ ಮತ್ತೆ ಬಂದಿದೆ. ನೀರಿನ ಬಿಕ್ಕಟ್ಟಿನ ಶಮನಕ್ಕಾಗಿ ಪ್ರತಿ ಗ್ರಾಮದಲ್ಲೂ ಪ್ರಯತ್ನ ನಡೆದಿದೆ. ಕೆಲವೆಡೆ ಹಳೆಯ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ವಿವಿಧೆಡೆ ಮಳೆನೀರನ್ನು ಸಂರಕ್ಷಿಸುವ ಯತ್ನ ನಡೆದಿದೆ' ಎಂದರು.
'ಪ್ರಯೋಗಾ' ಪ್ರಯತ್ನಕ್ಕೆ ಶ್ಲಾಘನೆ
ಶಾಲಾ ಹಂತದಲ್ಲಿ ವಿಜ್ಞಾನ ಶಿಕ್ಷಣವನ್ನು ಜನಪ್ರಿಯಗೊಳಿಸುವಲ್ಲಿ ಬೆಂಗಳೂರಿನ ಸ್ವಯಂಸೇವಾ ಸಂಸ್ಥೆ (ಎನ್ಜಿಒ) 'ಪ್ರಯೋಗ' ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ರಿಸರ್ಚ್ನ ಪ್ರಯತ್ನಗಳನ್ನು ಮೋದಿ ಶ್ಲಾಘಿಸಿದ್ದಾರೆ. ಸಂಶೋಧನಾ ಯೋಜನೆಗಳ ಮೇಲೆ ವಿಶೇಷ ಗಮನ ಹರಿಸಿರುವ 'ಪ್ರಯೋಗ' ಶಾಲಾ ಹಂತದಲ್ಲೇ ವಿಜ್ಞಾನ ಶಿಕ್ಷಣವನ್ನು ಜನಪ್ರಿಯಗೊಳಿಸುವಲ್ಲಿ ತೊಡಗಿಸಿಕೊಂಡಿದೆ.
ಇದಕ್ಕಾಗಿಯೇ ಅನ್ವೇಷಣ್ ಎಂಬ ಯೋಜನೆಯನ್ನು ಆರಂಭಿಸಿದೆ ಎಂದಿದ್ದಾರೆ. ಒಂಬತ್ತರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ರಸಾಯನ ವಿಜ್ಞಾನ ಭೂವಿಜ್ಞಾನ ಕ್ಷೇಮದಂತಹ ಕ್ಷೇತ್ರಗಳಲ್ಲಿ ಹೊಸತನದ ಅವಕಾಶ ಒದಗಿಸುವ ಜೊತೆಗೆ ಉತ್ತಮ ಸಂಶೋಧನಾ ಅನುಭವ ಮತ್ತು ಅವರ ಯೋಜನೆ ಪ್ರಕಟಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು ದಕ್ಷಿಣದ ಕನಕಪುರ ರಸ್ತೆಯ ರಾವುಗೋಡ್ಲುವಿನಲ್ಲಿರುವ ಪ್ರಯೋಗ ಇನ್ಸ್ಟಿಟ್ಯೂಟ್ ಆಪ್ ಎಜುಕೇಷನ್ ರಿಸರ್ಚ್ ಲಾಭರಹಿತ ಸಂಸ್ಥೆ. ಭೌತವಿಜ್ಞಾನ ಶಿಕ್ಷಣತಜ್ಞ ಎಚ್.ಎಸ್. ನಾಗರಾಜ ಸ್ಥಾಪಿಸಿದ್ದಾರೆ.



