ಆದರೆ, ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಚಂದ್ರ ಕುಮಾರ್ ಬೋಸ್, ಮರಳಿ ಸ್ಥಾಪಿಸಲಾಗಿರುವ ಟೋಪಿಯು ಅಸಲಿ ಟೋಪಿಯಂತೆ ಭಾಸವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ವಿಷಯದ ಕುರಿತು ತನಿಖೆ ನಡೆಯಬೇಕು ಹಾಗೂ ಸೂಕ್ತ ದೃಢೀಕರಣ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗುರುವಾರ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿಯ ಮಾಜಿ ನಾಯಕರೂ ಆದ ಚಂದ್ರ ಕುಮಾರ್ ಬೋಸ್, "ನಾನು ಹಾಗೂ ನನ್ನ ಕುಟುಂಬದ ಸದಸ್ಯರು ವೈಯಕ್ತಿಕವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೇತಾಜಿಯ ಟೋಪಿಯನ್ನು ಹಸ್ತಾಂತರಿಸಿದ್ದೆವು. ಜನವರಿ 23, 2019ರಂದು ನಡೆದ ನೇತಾಜಿ ದಿನಾಚರಣೆ (ಭಾರತೀಯ ದೇಶಪ್ರೇಮಿಗಳ ದಿನಾಚರಣೆ) ಸಂದರ್ಭದಲ್ಲಿ ದಿಲ್ಲಿಯ ಕೆಂಪು ಕೋಟೆಯಲ್ಲಿನ ನೇತಾಜಿ ವಸ್ತು ಸಂಗ್ರಹಾಲಯದಲ್ಲಿ ನಾನು ನೇತಾಜಿಯವರ ಟೋಪಿಯನ್ನು ವೈಯಕ್ತಿಕವಾಗಿ ಅರ್ಪಿಸಿದ್ದೆ ಎಂಬುದನ್ನು ಸ್ಮರಿಸಿಕೊಳ್ಳಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ನೀಡಿದ್ದಾರೆ.
ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, "ಜನವರಿ 19ರಿಂದ 25ರವರೆಗೆ ಪೋರ್ಟ್ ಬ್ಲೇರ್ ನಲ್ಲಿ ನಡೆದ 'ಪರಾಕ್ರಮ್ ದಿನಸ್' ಪ್ರದರ್ಶನದ ಅಂಗವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸಲಿ ಟೋಪಿಯನ್ನು ಕೆಂಪು ಕೋಟೆಯ ವಸ್ತು ಸಂಗ್ರಹಾಲಯದಿಂದ ಪೋರ್ಟ್ ಬ್ಲೇರ್ ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಅದು ಮರಳಿದ ಬಳಿಕ ಬೀಗದ ಸಮಸ್ಯೆ ಉಂಟಾಗಿದ್ದರಿಂದ ಅದನ್ನು ಸುರಕ್ಷಿತ ವಶದಲ್ಲಿರಿಸಬೇಕಾಗಿತ್ತು. ಇದೀಗ ಬೀಗವನ್ನು ಸರಿಪಡಿಸಲಾಗಿದ್ದು, ಟೋಪಿಯನ್ನು ಮರಳಿ ಪ್ರದರ್ಶನದಲ್ಲಿ ಇರಿಸಲಾಗಿದೆ" ಎಂದು 'ಎಕ್ಸ್' ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದೆ.

