ಇಂಧನ ಕೊರತೆ ಮತ್ತು ಬೆಲೆ ಏರಿಕೆಯ ಭೀತಿ ಕುರಿತ ವದಂತಿಗಳಿಂದಾಗಿ ಮತ್ತಷ್ಟು ಬೇಡಿಕೆ ಹೆಚ್ಚಿದ್ದು, ಪೆಟ್ರೋಲ್ ಪಂಪ್ ಗಳು ಹಾಗೂ ಅನಿಲ ಏಜೆನ್ಸಿಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡುಬಂತು.
ಭಾರಿ ಬೇಡಿಕೆಯ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಬರಿದಾಗಿ, 'ನೋ ಸ್ಟಾಕ್' ಫಲಕಗಳನ್ನು ಹಾಕಲಾಯಿತು. ತೈಲ ಮಾರಾಟ ಕಂಪನಿಗಳು ಮುಂಗಡ ಪಾವತಿಗಾಗಿ ಒತ್ತಾಯಿಸುತ್ತಿದ್ದು, ಬೇಡಿಕೆ ಅಧಿಕವಾಗುತ್ತಿದ್ದರೂ ಪೂರೈಕೆ ನಿಧಾನವಾಗುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ತೆಲಂಗಾಣ ಮತ್ತು ಮಹಾರಾಷ್ಟ್ರದ ಡೀಲರ್ ಗಳು ಬಹಿರಂಗಪಡಿಸಿದ್ದಾರೆ.
ಆದರೆ ತೆಲಂಗಾಣದಲ್ಲಿ ಮುಂದಿನ ಮೂರು ತಿಂಗಳುಗಳಿಗೆ ಸಾಕಾಗುವಷ್ಟು ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಇದೆ ಎಂದು ನಾಗರಿಕ ಪೂರೈಕೆ ಖಾತೆ ಸಚಿವ ಎನ್.ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಆದಾಗ್ಯೂ ತೆಲಂಗಾಣದಲ್ಲಿ ಹಲವು ಪೆಟ್ರೋಲ್ ಬಂಕ್ಗಳಲ್ಲಿ 'ದಾಸ್ತಾನು ಇಲ್ಲ' ಎಂಬ ಫಲಕ ಕಂಡುಬಂದಿದೆ. ಶೇಕಡ 40ರಷ್ಟು ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಬರಿದಾಗಿದೆ ಎಂದು ಪೆಟ್ರೋಲ್ ಮತ್ತು ಡೀಸೆಲ್ ಡೀಲರ್ ಗಳು ಹೇಳಿದ್ದಾರೆ.
ಪ್ರಸ್ತುತ ಹಣಕಾಸು ಒತ್ತಡದ ಹಿನ್ನೆಲೆಯಲ್ಲಿ ಮತ್ತು ಕಚ್ಚಾ ತೈಲದ ಬೆಲೆ ಹೆಚ್ಚಿರುವ ಕಾರಾಣದಿಂದ ದೈನಂದಿನ ಪಾವತಿಗಳನ್ನು ಮಾಡಬೇಕಾದದ್ದು ಅನಿವಾರ್ಯ ಎಂದು ಎಚ್ಪಿಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲೂ ಮಾಮೂಲಿ ಬೇಡಿಕೆಯ ದುಪ್ಪಟ್ಟು ಬೇಡಿಕೆ ಮಂಗಳವಾರ ಮತ್ತು ಬುಧವಾರ ಕಂಡುಬಂದಿದೆ. ಇದರಿಂದಾಗಿ ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ ದಾಸ್ತಾನು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ನೋದಲ್ಲಿ ತೈಲ ಉದ್ಯಮದ ಸಮನ್ವಯಾಧಿಕಾರಿ ಸಂಜಯ್ ಭಂಡಾರಿ ಹೇಳಿಕೆ ನೀಡಿ, "ವಿವೇಚನೆಯಿಂದ ಇಂಧನ ಬಳಸಿ" ಎಂದು ಕಿವಿಮಾತು ಹೇಳಿದ್ದಾರೆ.

