ಕಾಸರಗೋಡು: ಕಡಲತೀರದಲ್ಲಿ 'ಬೆರಳಿನ ಮೇಲಿನ ಶಾಯಿ ಗುರುತು ಪ್ರಜಾಪ್ರಭುತ್ವದ ರಕ್ಷಕ'ಎಂಬ ಸಂದೇಶದೊಂದಿಗೆ ಬೃಹತ್ ಮರಳು ಶಿಲ್ಪವನ್ನು ಬೇಕಲ ಕಡಲ ದಡದಲ್ಲಿ ನಿರ್ಮಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶೇ.ನೂರು ಮತದಾನ ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತ ಮತ್ತು 'ಸ್ವೀಪ್' ಜಂಟಿಯಾಗಿ ಆಯೋಜಿಸಿದ್ದ 'ವೋಟಾಯನಂ 2026' ಅಭಿಯಾನದ ಅಂಗವಾಗಿ ಈ ಶಿಲ್ಪವನ್ನು ನಿರ್ಮಿಸಲಾಗಿದೆ.
ಖ್ಯಾತ ಮರಳು ಶಿಲ್ಪಿ ಚಿತ್ರನ್ ಕುಞÂಮಂಗಲಂ ಅವರು ಐದು ತಾಸುಗಳಿಗೂ ಹೆಚ್ಚುಕಾಲ ಶ್ರಮವಹಿಸಿ, ಎಡಗೈ ತೋರುಬೆರಳನ್ನು ಮರಳು ಶಿಲ್ಪದ ಮೂಲಕ ರಚಿಸಿದ್ದಾರೆ. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಮರಳು ಶಿಲ್ಪವನ್ನು ಉದ್ಘಾಟಿಸಿದರು. ನಮ್ಮ ಪ್ರಜಾಪ್ರಭುತ್ವದ ಬಲವು ಪ್ರತಿಯೊಂದು ಮತದಲ್ಲೂ ಅಡಕವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.ನೂರು ಮತದಾನ ಸಾಧಿಸುವ ಗುರಿಯೊಂದಿಗೆ ಹಾಗೂ ಯುವಜನರಲ್ಲಿ ಮತದಾನದ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಸ್ವೀಪ್ ನೋಡಲ್ ಅಧಿಕಾರಿ ರತೀಶ್ ಪಿಲಿಕೋಡ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಬ್ಲಾಕ್ ಸಂಯೋಜಕರುಗಳಾದ ಕೆ. ಜಿಜಿ, ಕೆ. ನಿಮಿಷಾ, ಕೆ.ಪಿ. ರಮ್ಯಾ ಮೋಲ್, ಕೆ. ರಜನಿ, ಕೆ. ಜ್ಯೋತಿಷ್ ಮತ್ತು ಅನಸ್ ಉಪಸ್ಥಿತರಿದ್ದರು. ಜಿಲ್ಲಾ ಮಿಷನ್ ಸಹಾಯಕ ಸಂಯೋಜಕ ಕೆ.ಎಂ. ಕಿಶೋರ್ ಸ್ವಾಗತಿಸಿದರು ಮತ್ತು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಅತಿರ.ಟಿ.ಪಿ. ವಂದಿಸಿದರು. ಮತದಾನದ ಹಕ್ಕಿನ ಮಹತ್ವ ಸಾರಿಹೇಳುವ ಶಿಲ್ಪ ವೀಕ್ಷಣೆಗೆ ಬೀಚ್ಗೆ ನೂರಾರು ಮಂದಿ ಪ್ರವಾಸಿಗರು ಭೇಟಿ ನೀಡಿದರು.



