ಮುಂಬೈ: ಅಜಿತ್ ಪವಾರ್ ಅವರ ನಿಧನದ ಬಳಿಕ ತೆರವಾದ ಬಾರಾಮತಿ ಕ್ಷೇತ್ರದ ಉಪಚುನಾವಣೆಯಲ್ಲಿ ಅವರ ಪತ್ನಿ, ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಳವಾಗಿದೆ.
ಬಾರಾಮತಿ ಕ್ಷೇತ್ರದಿಂದ ಎಂಟು ಬಾರಿ ಶಾಸಕರಾಗಿದ್ದ ಮತ್ತು ಆರು ಬಾರಿ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರು ಜನವರಿ 28ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು 1991,1995, 1999, 2004, 2009, 2014, 2019 ಮತ್ತು 2024ರಲ್ಲಿ ಬಾರಾಮತಿ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಈ ಕ್ಷೇತ್ರದೊಂದಿಗೆ ಬಲವಾದ ನಂಟು ಹೊಂದಿದ್ದರು.
ಶರದ್ ಪವಾರ್ ನೇತೃತ್ವದ ಎನ್ಸಿಪಿಯು ಉಪ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂಬ ಸುಳಿವು ನೀಡಿದೆ.
ಎನ್ಸಿಪಿ (ಎಸ್ಪಿ) ನಾಯಕ ರೋಹಿತ್ ಪವಾರ್ ಅವರು, 'ಬಾರಾಮತಿ ಕ್ಷೇತ್ರದಿಂದ ಸುನೇತ್ರಾ ಪವಾರ್ ಅವರು ಅವಿರೋಧವಾಗಿ ಆಯ್ಕೆಯಾಗಲಿ ಎಂದು ಎಲ್ಲ ರಾಜಕೀಯ ನಾಯಕರು ಮತ್ತು ಪಕ್ಷಗಳಲ್ಲಿ ಮನವಿ ಮಾಡುತ್ತೇನೆ. ಪಕ್ಷದೊಂದಿಗೆ ಮಾತುಕತೆ ನಡೆಸದೇ ಈ ಹೇಳಿಕೆ ನೀಡುತ್ತಿರುವುದಕ್ಕೆ ಕ್ಷಮೆಯಾಚಿಸುತ್ತೇನೆ. ಆದರೂ ಇದು ಎಲ್ಲ ಆಕಾಂಕ್ಷೆ' ಎಂದು ಕಳೆದ ತಿಂಗಳು ಹೇಳಿದ್ದರು.

