ಮಥುರಾ: ಭಾರತದಲ್ಲಿ ಅಕ್ರಮ ವಲಸೆಗಾರರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, 'ಜನರು ನಿಗಾ ವಹಿಸಿ ನುಸುಳುಕೋರರನ್ನು ಪತ್ತೆ ಮಾಡಿ, ಅಧಿಕಾರಿಗಳಿಗೆ ಮಾಹಿತಿ ನೀಡಬೇಕು' ಎಂದು ತಿಳಿಸಿದರು.
ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಮಾತನಾಡಿದ ಅವರು, 'ಅಕ್ರಮವಾಗಿ ಬಂದ ವಿದೇಶಿಗರು ಇಲ್ಲಿ ಉದ್ಯೋಗ ಪಡೆಯದಂತೆ ನೋಡಿಕೊಳ್ಳಬೇಕು' ಎಂದು ಹೇಳಿದರು.
'ಫಲವತ್ತತೆಯ ದರವು ಮೂರು ಪಟ್ಟು ಕಡಿಮೆ ಇರುವುದು ದೀರ್ಘಾವಧಿಯಲ್ಲಿ ಅಪಾಯವನ್ನುಂಟುಮಾಡುತ್ತದೆ ಎಂದು ಜನಸಂಖ್ಯಾ ಅಧ್ಯಯನಗಳು ಎಚ್ಚರಿಸಿವೆ. ಕಡಿಮೆ ಜನನ ಪ್ರಮಾಣ ಹೊಂದಿರುವ ರಾಷ್ಟ್ರಗಳು ತಮ್ಮ ಜನಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಿವೆ' ಎಂದು ಹೇಳಿದರು.
ಭಾರತೀಯ ಜನಸಂಖ್ಯಾ ನೀತಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ ಅವರು, 'ಕಾನೂನು ಚೌಕಟ್ಟುಗಳಿದ್ದರೂ, ಸಾರ್ವಜನಿಕರ ನಿರ್ಧಾರವೇ ಮುಖ್ಯವಾಗುತ್ತದೆ' ಎಂದು ಹೇಳಿದರು.

