ಶ್ರೀನಗರ: ಭಾರಿ ಹಿಮಪಾತದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಇದರಿಂದ ಎರಡೂ ಕಡೆ ವಾಹನ ದಟ್ಟಣೆ ಉಂಟಾಗಿದ್ದು, ಸಾವಿರಾರು ವಾಹನಗಳು ಹೆದ್ದಾರಿಯಲ್ಲೇ ನಿಂತಿವೆ.
ಭಾರಿ ಹಿಮಪಾತದಿಂದ ಝೋಜಿಲಾ ಪಾಸ್ ಬಳಿ ಶನಿವಾರ ಒಂದು ಮಗು ಸೇರಿದಂತೆ 7 ಜನ ಮೃತಪಟ್ಟಿದ್ದರು.
ದುರಂತದಲ್ಲಿ 5 ಮಂದಿ ಗಾಯಗೊಂಡಿದ್ದಾರೆ. ಇದರಿಂದ ಈ ಪ್ರಮುಖ ಹೆದ್ದಾರಿಯನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಹಿಮ ತೆರವುಗೊಳಿಸುವಿಕೆ ಕಾರ್ಯಾಚರಣೆ ಮುಗಿದ ಬಳಿಕ ಹೆದ್ದಾರಿಯನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ಸಿಆರ್ಪಿಎಫ್, ಲಡಾಕ್ ಪೊಲೀಸರು ಸೇರಿದಂತೆ ಹಲವು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಹಿಮ ತೆರವುಗೊಳಿಸಲು ಶ್ರಮಿಸಿದರು.

