ಕೋಲ್ಕತ್ತ/ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕುರಿತು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸೇರಿದಂತೆ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ವಿವಿಧ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತುಕತೆ ನಡೆಸಿದರು. ಮೂರಕ್ಕಿಂತ ಹೆಚ್ಚಿನ ಹಂತಗಳಲ್ಲಿ ಚುನಾವಣೆ ನಡೆಸಬಾರದು ಎಂದು ಹೆಚ್ಚಿನ ಪಕ್ಷಗಳು ಮನವಿ ಮಾಡಿದವು.
ಟಿಎಂಸಿ, ಬಿಜೆಪಿ, ಸಿಪಿಎಂ, ಕಾಂಗ್ರೆಸ್, ಎಎಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದವು. 'ಒಂದೇ ಹಂತದಲ್ಲಿ ಚುನಾವಣೆ ನಡೆಸಿ. ಇಲ್ಲವಾದಲ್ಲಿ ಎರಡು ಹಂತಗಳನ್ನು ಮೀರಬೇಡಿ' ಎಂದು ಸಿಪಿಎಂ ಕೋರಿಕೊಂಡಿತು.
ಜ್ಞಾನೇಶ್ ಕುಮಾರ್ ಅವರೊಂದಿಗೆ ಸಭೆಯಲ್ಲಿ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ಇದ್ದರು.
ವಿಚಾರಣೆಗೆ ಒಪ್ಪಿಗೆ: ಎಸ್ಐಆರ್ ಪ್ರಕ್ರಿಯೆ ವೇಳೆ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಅಳಿಸಿ ಹಾಕಿದ್ದನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ ಮಾಲ್ಯಾ ಬಾಗ್ಚಿ ಅವರ ಪೀಠ ಮಂಗಳವಾರ ಹೇಳಿತು.
ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತ (ಸಭೆಯಲ್ಲಿ ಪಕ್ಷಗಳಿಗೆ ನೀಡಿದ ಭರವಸೆ)ಯಾವುದೇ ಕಾರಣಕ್ಕೂ ಹಿಂಸೆಗೆ ಜಾಗವಿಲ್ಲ. ಚುನಾವಣೆಯನ್ನು ಪಾರದರ್ಶಕವಾಗಿ ಮತ್ತು ಕಾನೂನು ಪ್ರಕಾರವಾಗಿಯೇ ಆಯೋಗವು ಚುನಾವಣೆ ನಡೆಸಲಿದೆ
'ಎಸ್ಐಆರ್: ನಮ್ಮ ಕಳವಳವನ್ನು ಕೇಳಲೇ ಇಲ್ಲ'
'ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ನಾವು ವ್ಯಕ್ತಪಡಿಸಿದ ಕಳವಳಗಳ ಕುರಿತು ಆಯೋಗವು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
'ಈ ಕುರಿತು ನೀವು ಸುಪ್ರೀಂ ಕೋರ್ಟ್ಗೆ ಹೋಗಿದ್ದೀರಿ ಅಲ್ಲಿ ವಿಚಾರಣೆ ನಡೆಯುತ್ತಿದೆ. ಎಲ್ಲವೂ ಅಲ್ಲಿಯೇ ನಿರ್ಧಾರವಾಗುತ್ತದೆ. ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಆಯೋಗ ಹೇಳಿತು' ಎಂದು ಟಿಎಂಸಿ ದೂರಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ 'ನಾನೊಬ್ಬ ಮಹಿಳೆ. 'ನೀವು ಕೂಗಬೇಡಿ' ಎಂದು ನನಗೆ ಹೇಳಲಾಯಿತು. ಜನರ ಹಕ್ಕಿನ ಕುರಿತು ನಾನೇಕೆ ಧ್ವನಿ ಎತ್ತಬಾರದು? ನಾವು ಎಸ್ಐಆರ್ ಕುರಿತು ಮಾತನಾಡಲು ಎಷ್ಟೇ ಯತ್ನಿಸಿದರೂ ಆಯೋಗವು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳಲೇ ಇಲ್ಲ. ಇಷ್ಟೇ ಆಗಿದ್ದರೆ ಸಭೆಗೆ ನಮ್ಮನ್ನು ಯಾಕೆ ಕರೆಯಬೇಕಿತ್ತು?' ಎಂದರು.
'ಹಾಗಾದರೆ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ತಪ್ಪೇ? ಖಂಡಿತ ಇಲ್ಲ. ನಾವು ಸರಿಯಾಗಿದ್ದನ್ನೇ ಮಾಡಿದ್ದೇವೆ. ಕಳೆದ ಎರಡು ತಿಂಗಳಲ್ಲಿ ರೋಹಿಂಗ್ಯಾ ಸಮುದಾಯದ ಒಬ್ಬರನ್ನೂ ಗುರುತಿಸಲಾಗಿಲ್ಲ. ಆದರೆ ಸಾಮಾನ್ಯ ಭಾರತೀಯನಿಗೆ ಹಿಂಸೆ ನೀಡಲಾಗುತ್ತಿದೆ ಅವರ ರಾಷ್ಟ್ರೀಯತೆಯನ್ನು ಪೌರತ್ವವನ್ನು ಸಾಬೀತು ಮಾಡುವಂತೆ ಹೇಳಲಾಗುತ್ತಿದೆ' ಎಂದು ದೂರಿದರು.
ಕಪ್ಪು ಬಾವುಟ ಪ್ರದರ್ಶನ
ಕೋಲ್ಕತ್ತದ ಕಾಳಿ ಘಾಟ್ ದೇವಸ್ಥಾನಕ್ಕೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸೋಮವಾರ ಭೇಟಿ ನೀಡಿದ್ದ ವೇಳೆ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗಿದ್ದು 'ಗೋ ಬ್ಯಾಕ್ ಜ್ಞಾನೇಶ್ ಕುಮಾರ್' ಎಂಬ ಘೋಷಣೆಗಳನ್ನು ಕೂಗಲಾಗಿದೆ. ವಿಧಾನಸಭೆ ಚುನಾವಣೆ ಕಾರಣ ವಿವಿಧ ಪಕ್ಷಗಳೊಂದಿಗೆ ಸಭೆ ನಡೆಸಲು ಅವರು ಮೂರು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದಾರೆ. ಭಾನುವಾರ ಅವರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಟಿಎಂಸಿ ಹಾಗೂ ಎಡಪಕ್ಷಗಳ ಕಾರ್ಯಕರ್ತರು ಇಂಥದ್ದೇ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದ್ದರು.
'ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜ್ಞಾನೇಶ್ ಕುಮಾರ್ ಅವರ ಮೂರು ದಿನಗಳ ಭೇಟಿ ವೇಳೆ ಅವರಿಗೆ ಬಿಗಿ ಭದ್ರತೆ ಒದಗಿಸಲಾಗುವುದು' ಎಂದು ಪೊಲೀಸರು ತಿಳಿಸಿದರು.

