ಹೈದರಾಬಾದ್: ಚಿಂತಕ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ (85) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ವರ್ಣಲತಾ ರವಿವಾರ ಹೈದಾರಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸ್ವರ್ಣಲತಾ ಮೂಲತಃ ಗದಗದವರು. ಈ ಹಿಂದೆ ನಟ ಅವರ ತಾಯಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.
ನನ್ನ ತಾಯಿ ಗದಗದವರು. ಅವರು ಅನಾಥೆ ಆಗಿದ್ದರು. ನನ್ನ ಅಜ್ಜಿ ತೀರಿಕೊಂಡಾಗ ಅಮ್ಮನಿಗೆ 12 ವರ್ಷ ವಯಸ್ಸು. ಬೆಳಗಾವಿಯ ಅನಾಥಾಶ್ರಾಮದಲ್ಲಿ ಬೆಳೆದರು. ನರ್ಸಿಂಗ್ ತರಬೇತಿ ಪಡೆದು ಬೆಂಗಳೂರಿಗೆ ಬಂದರು ಎಂದಿದ್ದರು.
ನಮ್ಮ ಅಪ್ಪ ಮಂಗಳೂರಿನವರು. ಅವರು ಬೆಂಗಳೂರಿಗೆ ಬಂದರು. ಇಬ್ಬರೂ ಮದುವೆ ಆದರು. ನಮ್ಮ ಅಪ್ಪನಿಗೆ ಅವರದ್ದೇ ಆದ ನಂಬಿಕೆ ಇದೆ, ತಾಯಿಗೆ ಅವರದ್ದೇ ಆದ ದೇವರ ನಂಬಿಕೆ ಇದೆ. ನನ್ನ ನಂಬಿಕೆ ಬೇರೆಯದೇ ಇದೆ ಎಂದು ಪ್ರಕಾಶ್ ರಾಜ್ ಉಲ್ಲೇಖಿಸಿದ್ದರು.
ಬೆಂಗಳೂರಿನ ಶಾಂತಿ ನಗರದಲ್ಲಿ ಇರುವ ಸಂತ ಮೈಕಲ್ಸ್ ಚರ್ಚ್ ನಲ್ಲಿ ಮಂಗಳವಾರ (ಮಾ. 31) ಬೆಳಗ್ಗೆ 10.30ಕ್ಕೆ ಪ್ರಾರ್ಥನಾ ಸಭೆ ಇರುತ್ತದೆ. ಆನಂತರ ಮಧ್ಯಾಹ್ನ 12ಕ್ಕೆ ಹೊಸೂರು ರಸ್ತೆಯಲ್ಲಿರುವ ಅಡುಗೋಡಿಯ ಸೇಕ್ರೆಡ್ ಹಾರ್ಟ್ ಸಿಮೆಟಿರಿ ಗೇಟ್ 7 ರಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಸ್ವರ್ಣಲತಾರ ನಿಧನಕ್ಕೆ ಚಲನಚಿತ್ರದ ಅನೇಕ ಗಣ್ಯರು ಮತ್ತು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.
ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಖ್ಯಾತ ನಟ ಪವನ್ ಕಲ್ಯಾಣ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಅಧಿಕೃತ ಕಚೇರಿಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಹಂಚಿಕೊಂಡಿರುವ ಪವನ್ ಕಲ್ಯಾಣ್, "ಖ್ಯಾತ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ನಿಧನರಾದ ಸುದ್ದಿ ಕೇಳಿ ನನಗೆ ತುಂಬಾ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನಾನು ಸರ್ವಶಕ್ತನಲ್ಲಿ ಪ್ರಾರ್ಥಿಸುತ್ತೇನೆ.
ತಾಯಿಯನ್ನು ಕಳೆದುಕೊಂಡು ಶೋಕದಲ್ಲಿರುವ ಪ್ರಕಾಶ್ ರಾಜ್ ಗಾರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ನನ್ನ ಆಳವಾದ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.



