ಕುಂಬಳೆ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಕ್ಕು ಸಂರಕ್ಷಣೆಗಾಗಿ ರಾಜಕೀಯ, ಮತ ಭೇದಗಳಿಲ್ಲದೆ ಒಗ್ಗಟ್ಟಿನಿಂದ ಪ್ರತಿಭಟಿಸಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ. ಮಲೆಯಾಳ ಭಾಷಾ ಮಸೂದೆಯ ಹೆಸರಲ್ಲಿ ಅಲ್ಪಸಂಖ್ಯಾತ ಕನ್ನಡಿಗರ ಸಾಂವಿಧಾನಿಕ ಹಕ್ಕಿಗಾಗುವ ಚ್ಯುತಿಯ ಬಗ್ಗೆ ಸರ್ಕಾರದೊಂದಿಗೆ ಇನ್ನಷ್ಟು ಚರ್ಚೆ ನಡೆಸುವ ಮೂಲಕ ಪರಿಹಾರ ಕಾಣುವ ನಿಟ್ಟಿನಲ್ಲಿ ಎಲ್ಲರ ಬೆಂಬಲ ಅಗತ್ಯ ಎಂದು ಜಿ.ಪಂ.ಸದಸ್ಯ ಸೋಮಶೇಖರ ಜೆ.ಎಸ್. ತಿಳಿಸಿದರು.
ಮಲೆಯಾಳ ಭಾಷಾ ಮಸೂದೆಯ ತಿದ್ದುಪಡಿಗೆ ಒತ್ತಾಯಿಸಿ ಕುಂಬಳೆ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಶನಿವಾರ ಆಯೋಜಿಸಲಾದ ಪ್ರತಿಭಟನಾ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಕೇರಳ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿ ರಾಜ್ಯಪಾಲರಿಗೆ ಕಳಿಸಿ ಬಳಿಕ ಮರಳಿರುವ ಮಲೆಯಾಳ ಭಾಷಾ ಮಸೂದೆ ಕನ್ನಡಿಗರ ಮೇಲೆ ತೂಗುಗತ್ತಿಯಾಗಿ ಯಾವತ್ತಿಗೂ ಕಳವಳಕಾರಿ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕನ್ನಡಿಗರು ವ್ಯಾಪಕ ಪ್ರತಿಭಟನೆಗಳನ್ನು ಮುಂದಿನ ದಿನಗಳಲ್ಲಿ ಸಮಗ್ರವಾಗಿ ಹಮ್ಮಿಕೊಳ್ಳುತ್ತಿದ್ದು, ಬೆಂಬಲ ಅಗತ್ಯ ಎಂದವರು ಕರೆ ನೀಡಿದರು.
ಬಿಜೆಪಿ ಕೇಂದ್ರ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಕನ್ನಡ ಭಾಷೆಯ ಮೇಲಾಗುವ ಯಾವುದೇ ಸವಾಲುಗಳಿಗೂ ಸದಾ ಬೆಂಬಲವಿದೆ ಎಂದು ತಿಳಿಸಿದರು.
ಕುಂಬಳೆ ಗ್ರಾ.ಪಂ.ಸದಸ್ಯ ಮಂಜುನಾಥ ಆಳ್ವ ಮಡ್ವ, ಹಿರಿಯ ಹೋರಾಟಗಾರ, ಗಮಕ ಕಲಾ ಪರಿಷತ್ತು ಅಧ್ಯಕ್ಷ ಟಿ.ಶಂಕರನಾರಾಯಣ ಭಟ್, ಕ.ಸಾ.ಪ. ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಜಿ.ಪಂ.ಸದಸ್ಯ ರಾಮಪ್ಪ ಮಂಜೇಶ್ವರ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ವಕೀಲ ಥೋಮಸ್ ಡಿ.ಸೋಜ, ನಿವೃತ್ತ ಶಿಕ್ಷಕಿ ಶಶಿಕಲಾ ಕುಂಬಳೆ, ಪತ್ರಕರ್ತರ ಸಂಘದ ಕಾರ್ಯದರ್ಶಿ ರವಿ ನಾಯ್ಕಾಪು, ಗೋಪಾಲ ಶೆಟ್ಟಿ ಅರಿಬೈಲು, ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಗುರುಪ್ರಸಾದ್ ಕೋಟೆಕಣಿ, ಕಾರಡ್ಕ ಬ್ಲಾ.ಪಂ.ಸದಸ್ಯ ಸುಧಾಮ ಗೋಸಾಡ ಮೊದಲಾದವರು ಮಾತನಾಡಿದರು. ಲೋಕನಾಥ ಶೆಟ್ಟಿ, ಡಾ.ಬೇ.ಸಿ.ಗೋಪಾಲಕೃಷ್ಣ, ಗಣೇಶ್ ಪ್ರಸಾದ್ ಪಾಣೂರು, ವೇಣುಗೋಪಾಲ ಪುತ್ತಿಗೆ, ಮೈರ್ಕಳ ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನಾ ಸಮಿತಿ ಸಂಚಾಲಕ ಭಾಸ್ಕರ ಕೆ. ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಣ ಪ್ರಭು ಕುಂಬಳೆ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು.

.jpg)
.jpg)
.jpg)


