ಕಾಸರಗೋಡು: ಚುನಾವಣಾ ಮಾರ್ಗಸೂಚಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ಮೂಲಕ ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಿರ್ವಹಿಸುವುದರ ಜತೆಗೆ ಮತಗಟ್ಟೆ ಅಧಿಕಾರಿಗಳ ಅನುಮಾನಗಳನ್ನು ನಿವಾರಿಸಲು ತರಬೇತುದಾರರಿಗೆ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ತಿಳಿಸಿದ್ದಾರೆ.
ಅವರು ವಿಧಾನಸಭಾ ಮಟ್ಟದ ತರಬೇತುದಾರರಿಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚುನಾವಣೆಯಲ್ಲಿ ಮತದಾನ ಪ್ರಮುಖ ಘಟ್ಟವಾಗಿದ್ದು, ಮತದಾನ ಸುಗಮವಾಗಿ ನಡೆದರೆ, ಚುನಾವಣೆ ಯಶಸ್ವಿಯಾಗಿ ಪೂರ್ತಿಯಾಗಿದೆ ಎಂದು ಪರಿಗಣಿಸಬಹುದು. ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ನಡೆಬೇಕಾದರೆ, ತರಬೇತಿ ಕಾರ್ಯಕ್ರಮಗಳು ಅನಿವಾರ್ಐ ಎಂದು ತಿಳಿಸಿದರು.
2026 ರ ಕೇರಳ ವಿಧಾನಸಭಾ ಚುನಾವಣೆಯ ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರ ಮಧು ಕರಿಂಬಿಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಚುನಾವಣಾ ತರಬೇತಿ ಇಲಾಖೆಯ ನೋಡಲ್ ಅಧಿಕಾರಿ, ಆರ್ಆರ್ ತಹಸೀಲ್ದಾರ್ ಕೆ.ಬಿ. ರಾಮು ಉಪಸ್ಥಿತರಿದ್ದರು.
ತರಬೇತಿಕಾರ್ಯಕ್ರಮದ ಅಂಗವಾಗಿ ಮತದಾನ ಪ್ರಕ್ರಿಯೆಗಳು ಮತ್ತು ಎಲೆಕ್ಟ್ರಾನಿಕ್ ಮತಯಂತ್ರಗಳ ವಿಷಯದ ಕುರಿತು ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರು ಕಾಞಂಗಾಡ್ ವಲಯ ತಾಲ್ಲೂಕು ಭೂ ಮಂಡಳಿಯ ಉಪನಿರ್ದೇಶಕ ಟಿ.ವಿ. ಸಜೀವನ್, ಸ್ಥಳೀಯಾಡಳಿತ ಇಲಾಖೆಯ ಆಂತರಿಕ ಜಾಗೃತ ಅಧಿಕಾರಿ ಟಿ.ಟಿ. ಸುರೇಂದ್ರನ್ ಮತ್ತು ಕಾರಡ್ಕ ಬ್ಲಾಕ್ ಪಂಚಾಯತ್ ಸಹಾಯಕ ಎಂಜಿನಿಯರ್ ಕೆ. ಪದ್ಮನಾಭನ್, ಮಂಜೇಶ್ವರ ತಾಲ್ಲೂಕು ಕಚೇರಿಯ ಕಿರಿಯ ಅಧೀಕ್ಷಕ ಜಿ. ಅಜಿತ್ಕುಮಾರ್ ಮತ್ತು ಬದಿಯಡ್ಕ ಗ್ರಾಮಾಧಿಕಾರಿ ಎ. ಧನಂಜಯನ್ ಅವರು ಎಲೆಕ್ಟ್ರಾನಿಕ್ ಮತ ಯಂತ್ರಗಳ ಪರಿಚಯ ಮತ್ತು ಮತ ಎಣಿಕೆ ವಿಷಯದ ಕುರಿತು ತರಗತಿ ನಡೆಸಿದರು.
ವಿಧಾನಸಭಾ ಕ್ಷೇತ್ರಗಳಿಂದ 50 ವಿಧಾನಸಭಾ ಮಟ್ಟದ ತರಬೇತುದಾರರು ಭಾಗವಹಿಸಿದ್ದರು. ಚುನಾವಣಾ ಉಪ ಕಲೆಕ್ಟರ್ ಎ. ಎನ್. ಗೋಪಕುಮಾರ್ ಸ್ವಾಗತಿಸಿದರು.



