ಚಂಡೀಗಢ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಉನ್ನತ ಸಮಿತಿ 'ಅಖಿಲ ಭಾರತೀಯ ಪ್ರತಿನಿಧಿ ಸಭಾ'ದ (ಎಬಿಪಿಎಸ್) ಮೂರು ದಿನಗಳ ಸಮಾವೇಶವು ಹರಿಯಾಣದ ಸಮಾಲಖಾದಲ್ಲಿ ಶುಕ್ರವಾರ ಪ್ರಾರಂಭವಾಯಿತು.
ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಭೆಯನ್ನು ಉದ್ಘಾಟಿಸಿದರು.
ಕಳೆದ ವರ್ಷ ಸಂಘ ಕೈಗೊಂಡಿದ್ದ ಕಾರ್ಯಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ಈ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಆರ್ಎಸ್ಎಸ್ನ 32 ಅಂಗಸಂಸ್ಥೆಗಳ ಅಧ್ಯಕ್ಷರು ಹಾಗೂ ಇತರ ಹಿರಿಯ ಕಾರ್ಯಕರ್ತರು ಸೇರಿದಂತೆ 1,487 ಮಂದಿ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಸರ್ಕಾರದ ಪ್ರಯತ್ನಗಳಿಂದಾಗಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಕ್ರಮೇಣವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಮಣಿಪುರದಲ್ಲೂ ಪರಿಸ್ಥಿತಿ ಸ್ಥಿರವಾಗಿದೆ ಎಂದು ಸಂಘವು ಗಮನಿಸಿದೆ. ಹಿಂದೂಗಳ ಹಕ್ಕುಗಳು ಹಾಗೂ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವಂತೆ ಸಂಘವು ಅಲ್ಲಿನ ಸರ್ಕಾರಕ್ಕೆ ಒತ್ತಾಯಿಸಿತು ಎಂದು ಸಂಘದ ಮುಖಂಡರು ತಿಳಿಸಿದರು.
ಸಂಘದ ಶತಮಾನೋತ್ಸವದ ಅಂಗವಾಗಿ ಈ ವರ್ಷ ಆಯೋಜಿಸಿದ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಹಾಗೂ ದೇಶದ ಸ್ಥಿತಿಗತಿಯ ಕುರಿತು ಚರ್ಚಿಸಲಾಗುವುದು ಎಂದರು.
'10 ಕೋಟಿಗೂ ಹೆಚ್ಚು ಮನೆಗಳ ತಲುಪಿದ್ದೇವೆ'
ಈ ವರ್ಷ ಶಾಖೆಗಳ ವಿಸ್ತರಣೆ ಹಾಗೂ ಸಾರ್ವಜನಿಕ ಸಂಪರ್ಕ ಅಭಿಯಾನಗಳ ಮೇಲೆ ವಿಶೇಷ ಒತ್ತು ನೀಡಲಾಗುತ್ತಿದೆ. 'ಗೃಹ ಸಂಪರ್ಕ' (ಸಾಮೂಹಿಕ ಸಂಪರ್ಕ) ಕಾರ್ಯಕ್ರಮದ ಅಡಿಯಲ್ಲಿ ದೇಶದಾದ್ಯಂತ 10 ಕೋಟಿಗೂ ಹೆಚ್ಚಿನ ಮನೆಗಳನ್ನು ತಲುಪಿದ್ದೇವೆ. 55000ಕ್ಕೂ ಹೆಚ್ಚು ಮುಸ್ಲಿಂ ಮತ್ತು 54000 ಕ್ರಿಶ್ಚಿಯನ್ ಮನೆಗಳನ್ನು ಸಂಪರ್ಕಿಸಲಾಗಿದೆ. ಬುಡಕಟ್ಟು ಪ್ರದೇಶಗಳನ್ನೂ ತಲುಪಿದ್ದೇವೆ. ನಾವು ಹೋದಲ್ಲೆಲ್ಲಾ ಆತ್ಮೀಯ ಸ್ವಾಗತ ದೊರೆತಿದೆ ಎಂದು ಆರ್ಎಸ್ಎಸ್ನ ಅಖಿಲ ಭಾರತೀಯ ಪ್ರಚಾರ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್ ಹಾಗೂ ಜಂಟಿ ಪ್ರಧಾನ ಕಾರ್ಯದರ್ಶಿ ಸಿ.ಆರ್ ಮುಕುಂದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿ 36000ಕ್ಕಿಂತ ಹೆಚ್ಚು ಕಡೆ ಹಿಂದೂ ಸಮ್ಮೇಳನಗಳನ್ನು ನಡೆಸಲಾಗಿದೆ. ಸಾಮಾಜಿಕ ಸಾಮರಸ್ಯ ಕುಟುಂಬದ ಮೌಲ್ಯಗಳ ಸಂರಕ್ಷಣೆ ಪರಿಸರ ಸಂರಕ್ಷಣೆ ಸ್ವಾವಲಂಬನೆ ನಾಗರಿಕ ಮತ್ತು ಸಂವಿಧಾನಗಳ ಕರ್ತವ್ಯಗಳ ಪಾಲನೆಯನ್ನು ಒಳಗೊಂಡಿರುವ ಆರ್ಎಸ್ಎಸ್ನ 'ಪಂಚ ಪರಿವರ್ತನ' ಉಪಕ್ರಮದ ಬಗ್ಗೆ ಅವರು ಮಾತನಾಡಿದರು.

