ನವದೆಹಲಿ: ಅನುಭವಿ ರಾಜತಾಂತ್ರಿಕ ಅಧಿಕಾರಿ ವಿಕ್ರಮ್ ದೊರೈಸ್ವಾಮಿ ಅವರನ್ನು ಚೀನಾಗೆ ಭಾರತದ ನೂತನ ರಾಯಭಾರಿಯನ್ನಾಗಿ ಗುರುವಾರ ನೇಮಕ ಮಾಡಲಾಗಿದೆ. ಪೂರ್ವ ಲಡಾಖ್ನಲ್ಲಿ ತಲೆದೋರಿದ್ದ ಬಿಕ್ಕಟ್ಟಿನಿನ ಬಳಿಕ ಉಭಯ ದೇಶಗಳ ನಡುವಣ ಸಂಬಂಧವನ್ನು ಪುನಃಸ್ಥಾಪಿಸುವ ಪ್ರಯತ್ನಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
1992ರ ಸಾಲಿನ ಐಎಫ್ಎಸ್ ಅಧಿಕಾರಿಯಾಗಿರುವ ವಿಕ್ರಮ್, ಸದ್ಯ ಬ್ರಿಟನ್ಗೆ ಭಾರತದ ಹೈಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಪ್ರದೀಪ್ ಕುಮಾರ್ ರಾವತ್ ಅವರು ಚೀನಾಗೆ ಭಾರತದ ರಾಯಭಾರಿಯಾಗಿದ್ದು, ವಿಕ್ರಮ್ ಅವರು ಶೀಘ್ರದಲ್ಲೇ ಹೊಸ ಹೊಣೆ ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಾಲ್ವಾನ್ ಕಣಿವೆಯಲ್ಲಿ 2020ರಲ್ಲಿ ಉಂಟಾದ ಸಂಘರ್ಷದ ಬಳಿಕ ಉಭಯ ದೇಶಗಳು ಸೇನಾ ಪಡೆಗಳನ್ನು ಜಮಾವಣೆಗೊಳಿಸಿದ್ದವು. ಬಳಿಕ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು. 2024ರ ಅಕ್ಟೋಬರ್ ಬಳಿಕ ಮಿಲಿಟರಿ ಬಿಕ್ಕಟ್ಟು ಅಂತ್ಯಗೊಂಡಿದೆ. ಇದೀಗ, ಎರಡೂ ರಾಷ್ಟ್ರಗಳು ಸಂಬಂಧದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಪ್ರಯತ್ನವನ್ನು ಚುರುಕುಗೊಳಿಸಿವೆ.
ದೆಹಲಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ವಿಕ್ರಮ್, ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಐಎಫ್ಎಸ್ ತೇರ್ಗಡೆಗೂ ಮುನ್ನ ಒಂದು ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ್ದರು.

