ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ಕೇರಳ ಪ್ರವಾಸವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂದೂಡಿದ್ದಾರೆ. ಆಸ್ಪತ್ರೆಯಲ್ಲಿ ಸೋನಿಯಾ ಅವರ ಆರೈಕೆ ಮಾಡುತ್ತಿರುವ ಕೇರಳದ ಶುಷ್ರೂಷಕಿಯರ ಬದ್ಧತೆಯನ್ನು ಮುಕ್ತಕಂಠದಿಂದ ಅವರು ಶ್ಲಾಘಿಸಿದ್ದಾರೆ.
ಕೋಯಿಕ್ಕೋಡ್ನಲ್ಲಿ ನೆರೆದಿದ್ದ ರ್ಯಾಲಿಯನ್ನು ಉದ್ದೇಶಿಸಿ ವರ್ಚುವಲ್ ವೇದಿಕೆಯಲ್ಲಿ ಮಾತನಾಡಿರುವ ಅವರು, 'ತಾಯಿ ಅವರು ಆಸ್ಪತ್ರೆಗೆ ದಾಖಲಾಗಿರುವುದರಿಂದ ಮಗನಾಗಿ ನಾನು ಅವರಿರುವ ಕೋಣೆಯಲ್ಲೇ ಸೋಫಾ ಮೇಲೆ ಕಳೆದ ರಾತ್ರಿ ವಿಶ್ರಾಂತಿ ಪಡೆದೆ. ಆದರೆ ಇಡೀ ರಾತ್ರಿ ನನಗೆ ಸಾಮಾಧಾನ ತಂದಿದ್ದು ಒಂದು ಸಂಗತಿ. ಅದೇನೆಂದರೆ, ಕೇರಳಂ ಮೂಲದ ಶುಷ್ರೂಷಕಿಯೊಬ್ಬರು ಪ್ರತಿ ಒಂದು ಗಂಟೆಗೆ ಬಂದು ತಾಯಿಯ ಆರೋಗ್ಯ ಪರೀಕ್ಷಿಸುತ್ತಿದ್ದರು' ಎಂದಿದ್ದಾರೆ.
'ಪ್ರತಿ ಒಂದು ಗಂಟೆಗೆ ಕೋಣೆಗೆ ಬರುತ್ತಿದ್ದರು. ತಾಯಿಯ ಆರೋಗ್ಯ ಪರೀಕ್ಷಿಸುತ್ತಿದ್ದರು. ತಾಯಿಯ ಕೈಹಿಡಿದು ಒಂದು ಸಣ್ಣ ಕಿರುನಗೆ ಬೀರುತ್ತಿದ್ದರು. ಇದು ಕೇರಳದ ಆ ಇಡೀ ಸಮುದಾಯದ ಬದ್ಧತೆಯ ಪ್ರತೀಕ. ದೇಶದೊಳಗೆ ಹಾಗೂ ಜಗತ್ತಿನೆಲ್ಲೆಡೆ ಇರುವ ಆಸ್ಪತ್ರೆಗಳಲ್ಲಿ ಕೇರಳದ ಶುಷ್ರೂಷಕಿಯರ ಈ ಬದ್ಧತೆಯನ್ನು ಕಾಣಬಹುದು' ಎಂದಿದ್ದಾರೆ.
'ಸಂಕಷ್ಟದ ಸಮಯದಲ್ಲಿ ಅದೆಷ್ಟು ಪುತ್ರರು, ಪುತ್ರಿಯರು, ಸೋದರರು ಹಾಗೂ ಸೋದರಿಯರಿಯರಿಗೆ ಕೇರಳಂನ ಶುಷ್ರೂಷಕಿಯರು ಸಮಾಧಾನ ತಂದಿದ್ದಾರೆ ಎಂಬುದನ್ನು ನಾನು ಆಲೋಚಿಸುತ್ತಿದ್ದೇನೆ' ಎಂದು ರಾಹುಲ್ ಹೇಳಿದ್ದಾರೆ.
'ಶುಷ್ರೂಷಕಿಯೊಂದಿಗೆ ನಾನು ಮಾತನಾಡಿದೆ. ರಾತ್ರಿ ನೀವು ವಿಶ್ರಾಂತಿ ಪಡೆಯಲಿಲ್ಲವೇ ಎಂದು ಕೇಳಿದೆ. ಇಲ್ಲ, ಕೆಲಸ ಮಾಡುತ್ತಿದ್ದೆ ಎಂದರು. ಇಡೀ ಜಗತ್ತು ಮಲಗಿರುವಾಗ, ಕೇರಳಂನಲ್ಲಿ ಮಾತ್ರವಲ್ಲ, ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಸಂಕಷ್ಟದಲ್ಲಿರುವವರ ಕೈಹಿಡಿದು ಕೇರಳದ ಈ ಶುಷ್ರೂಷಕಿಯರು ಮನಸ್ಸಿಗೆ ಆರಾಮ ನೀಡುತ್ತಿದ್ದಾರೆ' ಎಂದು ನೆನೆದಿದ್ದಾರೆ.
'ಇದುವೇ ಕೇರಳಂನ ನಿಜವಾದ ಚೇತನ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಚುನಾವಣೆ ಸಂದರ್ಭದಲ್ಲೇ ರಾಹುಲ್ ಗಾಂಧಿ ಅವರು ಈ ಮಾತು ಮಹತ್ವ ಪಡೆದುಕೊಂಡಿದೆ.
ಕೇರಳ ವಿಧಾನಸಭೆಗೆ ಏ. 9ರಂದು ಮತದಾನ ನಡೆಯಲಿದೆ. 140 ಕ್ಷೇತ್ರಗಳಲ್ಲಿ 100ರಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಆದರೆ ಸತತ ಎರಡು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಎಡಪಕ್ಷವು ಕಠಿಣ ಸ್ಪರ್ಧೆಯನ್ನೊಡ್ಡಿದೆ ಎಂದೇ ವಿಶ್ಲೇಷಿಸಲಾಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲುಸೋನಿಯಾ ಗಾಂಧಿ ಆರೋಗ್ಯ ಸ್ಥಿರ
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಸೋನಿಯಾ: ವರದಿ
'ಸೋಂಕಿಗೆ ತುತ್ತಾಗಿರುವ ಸೋನಿಯಾ ಗಾಂಧಿ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ಕುರಿತು ವೈದ್ಯಕೀಯ ತಂಡ ನಿಗಾ ವಹಿಸಿದೆ' ಎಂದು ದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
'79 ವರ್ಷದ ಸೋನಿಯಾ ಅವರನ್ನು ಮಾರ್ಚ್ 24ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಮುಂದಿನ ಎರಡು ದಿನಗಳ ಕಾಲ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಯಲಿದೆ' ಎಂದಿದ್ದಾರೆ.

