ಮದುರೈ: ಎಐಎಡಿಎಂಕೆಯ ಉಚ್ಚಾಟಿತ ನಾಯಕ ಒ.ಪನ್ನೀರ್ಸೆಲ್ವಂ ಅವರು ಡಿಎಂಕೆ ಸೇರ್ಪಡೆಯಾಗಿದ್ದನ್ನು ಬಿಜೆಪಿಯ ತಮಿಳುನಾಡು ಚುನಾವಣಾ ಉಸ್ತುವಾರಿ ಆಗಿರುವ ಕೇಂದ್ರ ಸಚಿವ ಪೀಯೂಷ್ ಗೋಯಲ್ ಶನಿವಾರ ಟೀಕಿಸಿದ್ದಾರೆ.
'ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಪನ್ನೀರ್ಸೆಲ್ವಂ ಅವರಿಗೆ ಅಪಾರ ಗೌರವ, ಪ್ರೀತಿ ನೀಡಿದ್ದರು.
ಮುಖ್ಯಮಂತ್ರಿ ಆಗುವ ಅವಕಾಶವನ್ನೂ ಕಲ್ಪಿಸಿದ್ದರು. ಆದರೆ, ಅವರು ಜಯಲಲಿತಾ ಅವರ ಆದರ್ಶಗಳಿಗೆ ದ್ರೋಹ ಬಗೆದಿದ್ದಾರೆ. ತಮಿಳುನಾಡಿನ ಸ್ವಾಭಿಮಾನಿ ಜನರು ಪನ್ನೀರ್ಸೆಲ್ವಂ ಅವರನ್ನು ಕ್ಷಮಿಸುವುದಿಲ್ಲ' ಎಂದು ಪೀಯೂಷ್ ಹೇಳಿದ್ದಾರೆ.
ಮಾರ್ಚ್ 1ರಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ನೀಡಲಿದ್ದು, ಅದಕ್ಕೂ ಮುನ್ನ ನಗರಕ್ಕೆ ಭೇಟಿ ನೀಡಿರುವ ಪೀಯೂಷ್ ಅವರು, ಪನ್ನೀರ್ಸೆಲ್ವಂ ಡಿಎಂಕೆಗೆ ಸೇರಿರುವುದು ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಹಿಂದೆ ಬಿಜೆಪಿ ಮೈತ್ರಿಕೂಟದಲ್ಲಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಪನ್ನೀರ್ಸೆಲ್ವಂ ಅವರು, ಫೆಬ್ರವರಿ 27ರಂದು ಡಿಎಂಕೆ ಮುಖ್ಯಸ್ಥ, ಹಾಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸಮ್ಮುಖದಲ್ಲಿ ತಮ್ಮ ಮಗ ಒ.ಪಿ.ರವೀಂದ್ರನಾಥ್ ಮತ್ತು ಕೆಲವು ಬೆಂಬಲಿಗರೊಂದಿಗೆ ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ.

