ನವದೆಹಲಿ: 'ಪಶ್ಚಿಮ ಏಷ್ಯಾದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ತ್ವರಿತವಾಗಿ ಅಂತ್ಯವಾಗಬೇಕಿದೆ. ಯಾವುದೇ ಸಮಸ್ಯೆಯು ಸೇನಾ ಸಂಘರ್ಷದಿಂದ ಕೊನೆಗೊಳ್ಳಲು ಸಾಧ್ಯವಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪ್ರತಿಪಾದಿಸಿದ್ದಾರೆ.
ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಜೊತೆಗಿನ ಮಾತುಕತೆಯ ಬಳಿಕ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.
'ಭಾರತ ಮತ್ತು ಫಿನ್ಲೆಂಡ್ ದೇಶಗಳು ಕಾನೂನು ಪಾಲನೆ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೇಲೆ ನಂಬಿಕೆ ಇಟ್ಟಿವೆ. ಅದು ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾವಾಗಿರಲಿ. ಬಿಕ್ಕಟ್ಟು ಶಮನಕ್ಕೆ ನಡೆಯುವ ಎಲ್ಲ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ' ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಮತ್ತು ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಸ್ಟಬ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
'ಯುದ್ಧವನ್ನು ಕೊನೆಗೊಳಿಸುವುದು ಎಲ್ಲರ ಹಿತಾಸಕ್ತಿಗೆ ಒಳಿತು ಎಂಬುವುದನ್ನು ಒಪ್ಪಿಕೊಂಡಿದ್ದೇವೆ. ವಿಶ್ವಸಂಸ್ಥೆಯ ಮೂಲತತ್ವಗಳನ್ನು ಗೌರವಿಸಿದರೆ ಮಾತ್ರ ಶಾಂತಿ ಸ್ಥಾಪನೆ ಸಾಧ್ಯ' ಎಂದು ಸ್ಟಬ್ ಹೇಳಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕಾಗಿ ಭಾರತ ಪ್ರಯತ್ನವನ್ನು ಸ್ಟಬ್ ಬಲವಾಗಿ ಬೆಂಬಲಿಸಿದರು. 'ಪ್ರಸ್ತುತ ಜಾಗತಿಕ ಭೌಗೋಳಿಕ ವಾಸ್ತವಗಳನ್ನು ಪ್ರತಿಬಿಂಬಿಸಲು ಮತ್ತು ಜಾಗತಿಕ ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆಗೆ ಇದು ಅತ್ಯಗತ್ಯವಾಗಿದೆ' ಎಂದು ಸ್ಟಬ್ ಹೇಳಿದರು.
ರಕ್ಷಣೆ, ಬಾಹ್ಯಾಕಾಶ, ಸೆಮಿಕಂಡಕ್ಟರ್ ಮತ್ತು ವಿರಳ ಖನಿಜ ಕ್ಷೇತ್ರಗಳಿಗೆ ಸಂಬಂಧಿಸಿದ ಸಹಭಾಗಿತ್ವವನ್ನು ಮತ್ತಷ್ಟು ಹೆಚ್ಚಿಸಲು ಉಭಯ ರಾಷ್ಟ್ರಗಳು ಸಮ್ಮತಿಸಿದವು.
'ಜಗತ್ತು ಅಸ್ಥಿರತೆ ಮತ್ತಯ ಅನಿಶ್ಚಿತತೆ ಕಾಲಘಟ್ಟದಲ್ಲಿದೆ. ಜಗತ್ತಿನ ಹಲವು ಭಾಗಗಳಲ್ಲಿ ಸಂಘರ್ಷವಿದೆ. ಇಂತಹ ಜಾಗತಿಕ ಸನ್ನಿವೇಶದಲ್ಲಿ ವಿಶ್ವದ ಎರಡು ಪ್ರಮುಖ ರಾಜತಾಂತ್ರಿಕ ಶಕ್ತಿಗಳಾದ ಭಾರತ ಮತ್ತು ಯುರೋಪ್ ತಮ್ಮ ಸಂಬಂಧಗಳ ಸುವರ್ಣಯುಗಕ್ಕೆ ಕಾಲಿಡುತ್ತಿವೆ' ಎಂದು ಮೋದಿ ಹೇಳಿದರು.

