ಕಾಸರಗೋಡು: ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಬೇಕಲ ಠಾಣೆ ಪೊಲೀಸರು ಬಂಧಿಸಿದ್ದ ಪಾಲಕ್ಕಾಡ್ ನಿವಾಸಿ ಜಲೀಲ್ ಯಾನೆ ಶಟ್ಟರ್ ಜಲೀಲ್ ಹಾಗೂ ಕಾಸರಗೋಡು ಆಲಂಪಾಡಿ ನಿವಾಸಿ ಅಬ್ದುಲ್ಲತೀಫ್ ಎಂಬವರು ಕುಂಬಳೆ ಕಳತ್ತೂರು ನಿವಾಸಿ ಯೂಸುಫ್ ಅವರ ಮನೆಯಿಂದ 9ಪವನು ಚಿನ್ನ ಹಾಗೂ ಒಂದು ಲಕ್ಷ ರೂ. ನಗದು ಕಳವುಗೈದ ಪ್ರಕರಣದಲ್ಲೂ ಶಾಮೀಲಾಗಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.
ಬೇಕಲ ಡಿವೈಎಸ್ಪಿ ಎಂ.ಪಿ ಆಜಾದ್ ನೇತೃತ್ವದ ಪೊಲೀಸರ ತಂಡ ಕಳವುಪ್ರಕರಣವೊಂದಕ್ಕೆ ಸಂಬಂಧಿಸಿ ಈ ಇಬ್ಬರು ಕುಖ್ಯಾತ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಫೆ. 1ರಂದು ಕಳತ್ತೂರಿನ ಯೂಸುಫ್ ಅವರ ಮನೆಯಿಂದ ನಡೆದ ಕಳವಿನ ಬಗ್ಗೆ ಮಾಹಿತಿ ಲಭಿಸಿತ್ತು. ಪೆ. 7ರಂದು ಪೆರಿಯ ನಾಲಕ್ಕರ ನಿವಾಸಿ ಗೋಪಾಲಕೃಷ್ಣನ್ ಎಂಬವರ ಮನೆಯಿಂದ ಆರು ಪವನು ಚಿನ್ನ ಹಾಗೂ ಒಂದು ಲಕ್ಷ ರೂ. ನಗದು ಕಳವಾಗಿದ್ದು, ಈ ಪ್ರಕರಣದಲ್ಲೂ ಆರೋಪಿಗಳು ಶಾಮೀಲಾಗಿರುವ ಬಗ್ಗೆ ತನಿಖೆ ವಿಸ್ತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



