ನವದೆಹಲಿ (PTI): ಭಾರತೀಯ ನಾಗರಿಕರನ್ನು ಕಳ್ಳಸಾಗಣೆ ಮಾಡಿ ಮ್ಯಾನ್ಮಾರ್ನಲ್ಲಿ ಬೃಹತ್ ಪ್ರಮಾಣದ ಸೈಬರ್ ವಂಚನೆ ಜಾಲಕ್ಕೆ ಒಪ್ಪಿಸುತ್ತಿದ್ದ ಸೂತ್ರಧಾರನನ್ನು ಸಿಬಿಐ ಬಂಧಿಸಿದೆ.
ಮುಂಬೈ ನಿವಾಸಿ ಸುನಿಲ್ ನೆಲ್ಲತ್ತು ರಾಮಕೃಷ್ಣನ್ ಬಂಧಿತ ಆರೋಪಿ. ಈತ ನಿರುದ್ಯೋಗಿ ಭಾರತೀಯ ನಾಗರಿಕರನ್ನು ಸೈಬರ್ ಅಪರಾಧ ಕೃತ್ಯಗಳ ಕಾರ್ಯಗಳನ್ನು ಕೈಗೊಳ್ಳಲು ಒದಗಿಸುತ್ತಿದ್ದ.
ವಿಶೇಷವಾಗಿ ಮ್ಯಾವಡ್ಡಿ (ಕೆಕೆ ಪಾರ್ಕ್) ಪ್ರದೇಶದಲ್ಲಿ ಜನರನ್ನು ವಂಚಿಸಲು ಬಳಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಥಾಯ್ಲೆಂಡ್ನಲ್ಲಿ ಹೆಚ್ಚು ವೇತನದ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ದೆಹಲಿಯಿಂದ ಬ್ಯಾಂಕಾಕ್ಗೆ ಕರೆಸಿಕೊಂಡು ನಂತರ ರಹಸ್ಯವಾಗಿ ಮ್ಯಾನ್ಮಾರ್ಗೆ ಕಳುಹಿಸಲಾಗುತ್ತಿತ್ತು.
ಅಲ್ಲಿ ಅವರನ್ನು ಜಗತ್ತಿನ ವಿವಿಧೆಡೆಯ ಜನರಿಗೆ ಡಿಜಿಟಲ್ ಅರೆಸ್ಟ್, ಕ್ರಿಪ್ಟೋಕರೆನ್ಸಿ ಹೂಡಿಕೆಯಂತಹ ಸೈಬರ್ ವಂಚನೆ ಎಸಗುವ ಕೆಲಸಕ್ಕೆ ದೂಡಲಾಗುತ್ತಿತ್ತು' ಎಂದು ಸಿಬಿಐ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಥಾಯ್ಲೆಂಡ್ನಿಂದ ವಾಪಸಾಗಿದ್ದ ಕೆಲವು ಸಂತ್ರಸ್ತರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಈ ವೇಳೆ ಸುನಿಲ್ ಅಲಿಯಾಸ್ ಕೃಶ್ ಪಾತ್ರ ಬಹಿರಂಗವಾಗಿತ್ತು. ಈತ ಮಾನವ ಕಳ್ಳಸಾಗಣೆಗೆ ನೆರವು ನೀಡುತ್ತಿದ್ದ ಪ್ರಮುಖನಾಗಿದ್ದ' ಎಂದು ಅಧಿಕಾರಿ ತಿಳಿಸಿದ್ದಾರೆ.
'ಸುನಿಲ್ ಮೇಲೆ ಕಣ್ಣಿಟ್ಟಿದ್ದ ಸಿಬಿಐ, ಆತ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಬಂಧಿಸಿದೆ. ಆತನ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಮ್ಯಾನ್ಮಾರ್, ಕಾಂಬೋಡಿಯಾಗೆ ಮಾನವ ಕಳ್ಳಸಾಗಣೆ ಮಾಡಿರುವುದನ್ನು ಸಾಬೀತುಪಡಿಸುವ ಡಿಜಿಟಲ್ ಸಾಕ್ಷ್ಯಗಳು ಪತ್ತೆಯಾಗಿವೆ' ಎಂದು ಅಧಿಕಾರಿ ಹೇಳಿದ್ದಾರೆ.

