ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಸಿದ್ಧತೆಗಳು ಆರಂಭವಾಗಿದ್ದು, ತಮಿಳಿನ ಖ್ಯಾತ ಸಿನಿಮಾ ನಿರ್ದೇಶಕ ಸುಂದರ್.ಸಿ ಅವರು ಪುಥಿಯಾ ನೀತಿ ಕಚ್ಚಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.
ಪುಥಿಯಾ ನೀತಿ ಕಚ್ಚಿ(ಪಿಎನ್ಕೆ) ಪಕ್ಷವು ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟದೊಂದಿಗೆ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.
ಸುಂದರ್.ಸಿ ಅವರು ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದು, ಮಧುರೈ ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಪಿಎನ್ಕೆ ಸ್ಥಾಪಕ ಅಧ್ಯಕ್ಷ ಎ.ಸಿ. ಷಣ್ಮುಗಂ ಹೇಳಿದ್ದಾರೆ.
ಮೂರು ದಶಕಗಳಿಗೂ ಹೆಚ್ಚು ಕಾಲ ಅವರ ಸಿನಿಮಾಗಳನ್ನು ಬೆಂಬಲಿಸಿದ ಜನರ ಸೇವೆ ಮಾಡಲು ಸುಂದರ್ ಅವರು ಬಯಸಿದ್ದಾರೆ ಎಂದು ಅವರ ಪತ್ನಿ ಮತ್ತು ಬಿಜೆಪಿ ನಾಯಕಿಯಾಗಿರುವ ಖುಷ್ಬೂ ಸುಂದರ್ ಹೇಳಿದ್ದಾರೆ.
ಮಧುರೈ ಕೇಂದ್ರ ಕ್ಷೇತ್ರದಲ್ಲಿ ಅಡಳಿತಾರೂಢ ಡಿಎಂಕೆ ಪಕ್ಷವು ಬಿಗಿಹಿಡಿತ ಹೊಂದಿದೆ. ಮಾಹಿತಿ ತಂತ್ರಜ್ಞಾನ ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಅವರು ಆ ಕ್ಷೇತ್ರದ ಶಾಸಕರಾಗಿದ್ದಾರೆ.
ಪಳನಿವೇಲ್ ತ್ಯಾಗರಾಜನ್ ಅವರ ತಾತ ಪಿಎನ್ಕೆ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.
ಸುಂದರ್.ಸಿ ಅವರು ಹಾರರ್ - ಕಾಮಿಡಿ ಜಾನರ್ನ 'ಅರಣ್ಮನೈ' ಚಿತ್ರ ಸರಣಿಯ ಮೂಲಕ ತಮಿಳುನಾಡು ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಸಿನಿ ತಾರೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೂಡ ನಟ ವಿಜಯ್ ಅವರು ತಮ್ಮ ಟಿವಿಕೆ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏ.23ರಂದು ಮತದಾನ ನಡೆಯಲಿದೆ.

