ಹೈದರಾಬಾದ್: ಬೀದಿನಾಯಿಗಳ ವಿರುದ್ಧ ಹಿಂಸೆಯ ಮತ್ತೊಂದು ನಿದರ್ಶನವು ಬೆಳಕಿಗೆ ಬಂದಿದೆ. ಮಂಚಿರ್ಯಾಲ್ ಜಿಲ್ಲೆಯ ಕಿಸ್ಟಾಪುರ ಗ್ರಾಮದಲ್ಲಿ ಮಾ.7 ಮತ್ತು 8ರ ನಡುವಿನ ರಾತ್ರಿ ಸುಮಾರು ನೂರು ಬೀದಿನಾಯಿಗಳಿಗೆ ವಿಷವುಣಿಸಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಟ್ರೇ ಆಯನಿಮಲ್ ಫೌಂಡೇಷನ್ ಆಫ್ ಇಂಡಿಯಾದ ಗೌತಮ್ ಎನ್ನುವವರು ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಸರಪಂಚ್ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ಬೀದಿನಾಯಿಗಳನ್ನು ಕೊಲ್ಲಲು ಇಬ್ಬರು ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದರು. ನಾಯಿಗಳಿಗೆ ವಿಷದ ಚುಚ್ಚುಮದ್ದು ನೀಡಿ ಬಳಿಕ ಅವುಗಳನ್ನು ನದಿಯೊಂದರ ಬಳಿ ಎಸೆಯಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಪೊಲೀಸರು ಸರಪಂಚ್ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿರುದ್ಧ ಬಿಎನ್ಎಸ್ನ ಸಂಬಂಧಿತ ಕಲಂಗಳು ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜ.2026 ಮತ್ತು ಡಿ.2025ರಲ್ಲಿ ತೆಲಂಗಾಣದ ವಿಭಿನ್ನ ಭಾಗಗಳಲ್ಲಿ ಬೀದಿನಾಯಿಗಳ ಸಾಮೂಹಿಕ ಹತ್ಯೆಯ ಹಲವಾರು ಘಟನೆಗಳು ವರದಿಯಾಗಿದ್ದವು. ಕಳೆದ ವರ್ಷದ ಡಿಸೆಂಬರ್ನಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಮುನ್ನ ಗ್ರಾಮಸ್ಥರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕೆಲವು ಅಭ್ಯರ್ಥಿಗಳು ಈ ಹತ್ಯೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

