ಕುಂಬಳೆ: ರಸ್ತೆಗೆ ಡಾಮರೀಕರಣ ನಡೆಸಿ ಗುತ್ತಿಗೆದಾರ ಮರಳಿದ ಬೆನ್ನಲ್ಲೇ ಡಾಮರು ಎದ್ದು ರಸ್ತೆ ಮತ್ತೆ ಪೂರ್ವಸ್ಥಿತಿಗೆ ತಲುಪತೊಡಗಿದೆ.
ಕುಂಬಳೆ-ಮಾಟೆಂಗುಳಿಯ 400 ಮೀಟರ್ ರಸ್ತೆಗೆ ಇತ್ತೀಚೆಗೆ ಡಾಮರೀಕರಣ ನಡೆಸಲಾಗಿದೆ. ಕಾಮಗಾರಿಯ ಬಳಿಕ ಗುತ್ತಿಗೆದಾರ ಮರಳಿದ ಬೆನ್ನಲ್ಲೇ ಡಾಮರು ಎದ್ದು ಮತ್ತೆ ರಸ್ತೆ ಹಾನಿಯಾಗುವ ಸ್ಥಿತಿಗೆ ತಲುಪತೊಡಗಿದೆ. ಡಾಮರು ಹಾಗೂ ಬೇಬಿಜಲ್ಲಿ ಉಪಯೋಗಿಸಿ ರಸ್ತೆಗೆ ನಡೆಸಿದ ಡಾಮರೀಕರಣದಲ್ಲಿ ಲೋಪವುಂಟಾಗಿರುವುದಾಗಿಯೂ ಇದುವೇ ರಸ್ತೆ ಮತ್ತೆ ಕಳಪೆಯಾಗಲು ಕಾರಣವಾಗಿದೆಯೆಂದು ನಾಗರಿಕರು ಹೇಳುತ್ತಿದ್ದಾರೆ.
ಐದು ಲಕ್ಷ ರೂ.ವ್ಯಯಿಸಿ ನಡೆಸಿದ ಡಾಮರೀಕರಣದಿಂದ ನಾಡಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಈಗಾಗಲೇ ನಾಲ್ಕೈದು ಕಡೆಗಳಲ್ಲಿ ಡಾಮರು ಎದ್ದು ಹೋಗಿದೆ. ಉಳಿದ ಭಾಗದ ಡಾಮರು ಕೂಡಾ ಎದ್ದು ಹೋಗುವ ಸಾಧ್ಯತೆಯಲ್ಲಿದೆ ಎಂದು ದೂರಲಾಗಿದೆ. ಶಾಸಕ ಎಂ.ಸಿ. ಖಮರುದ್ದೀನ್ರ ಅಭಿವೃದ್ಧಿ ನಿಧಿಯಿಂದ ಡಾಮರೀಕರಣ ನಡೆಸಲು ಐದು ಲಕ್ಷ ರೂಪಾಯಿ ಮಂಜೂರು ಮಾಡಲಾಗಿತ್ತು. ಈ ಮೊತ್ತವನ್ನು ಪಡೆದು ಡಾಮರೀಕರಣ ಬಳಸಲು ಕಳೆದ ಐದು ವರ್ಷದಿಂದ ಈ ವಾರ್ಡ್ನ ಸದಸ್ಯನಾಗಿದ್ದ ವಿವೇಕ್ ಹಲವು ಬಾರಿ ಓಡಾಡಿದ್ದಾರೆ. ಆದರೂ ರಸ್ತೆಯ ಡಾಮರೀಕರಣದಿಂದ ಯಾವುದೇ ಪ್ರಯೋಜನವಾಗಲಿಲ್ಲ. ಖಜಾನೆಯ ಹಣವನ್ನು ಲಪಟಾಯಿಸುವವರನ್ನು ಹಾಗೂ ಅವರಿಗೆ ಸಹಾಯವೊದಗಿಸುವವರನ್ನು ಸುಮ್ಮನೆ ಬಿಡಕೂಡದೆಂದು ಒತ್ತಾಯಿಸಿ ನಾಗರಿಕರು ವಿಜಿಲೆನ್ಸ್ಗೆ ಮನವಿ ನೀಡಿದ್ದಾರೆ.

.jpg)
.jpg)
