ಮುಳ್ಳೇರಿಯ: ಅಂಗೈ ಅಗಲ ಜಾಗದಲ್ಲಿ ನೂರಾರು ಭತ್ತದ ತಳಿಗಳ ಸಂವರ್ಧನೆಗೆ ಮಹತ್ವದ ಕೊಡುಗೆ ನೀಡುವುದರೊಂದಿಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಸತ್ಯನಾರಾಯಣ ಬೆಳೇರಿ ಅವರ ಮುಂದಿನ ಸಂಶೋಧನೆಗೆ ಸಹಾಯಕ್ಕಾಗಿ ಟ್ರಸ್ಟ್ ರಚನೆ ಅನಿವಾರ್ಯ ಎಂಬುದಾಗಿ ಪ್ರಗತಿಪರ ಕೃಷಿಕ, ಸಾಮಾಜಿಕ ಮುಂದಾಳು ಕಲ್ಲಗಚಂದ್ರಶೇಖರ ರಾವ್ ತಿಳಿಸಿದ್ದಾರೆ.
ಅವರು ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 650ಕ್ಕೂ ಅಧಿಕ ಭತ್ತದ ತಳಿ ಸಂರಕ್ಷಿಸಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿದ ಸತ್ಯನಾರಾಯಣ ಬೆಳೇರಿ ಅವರ ಬಗ್ಗೆ ಲೇಖಕ, ಅಂಕಣಕಾರ ನರೇಂದ್ರ ರೈ ದೇರ್ಲ ಬರೆದ 'ನೆಲದ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ-ಭತ್ತದ ತಳಿಯ ಕಾವಲುಗಾರ'ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ, ಧಾರ್ಮಿಕ ಮುಂದಾಳು ಮಧುಸೂಧನ ಆಯರ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಬೆಳೇರಿ ಅವರ ಭತ್ತದ ತಳಿ ಸಂಗ್ರಹಣಾ ಅಧ್ಯಯನ ಕೇಂದ್ರವನ್ನು ಸುಸಜ್ಜಿತವಾಗಿ ನಿರ್ಮಿಸುವ ನಿಟ್ಟಿನಲ್ಲಿ ಕಾಸರಗೋಡಿನ ಜನತೆ ಕೈ ಜೋಡಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು. ಈ ಸಂದರ್ಭ ಪಯ್ಯನ್ನೂರಿನ ಮಹಾವಿಷ್ಣು ದೇವಾಲಯದ ಭದ್ರಕಲಶದೊಳಗೆ ದೊರೆತ ಶತಮಾನಕ್ಕೂ ಹಿಂದಿನ ಭತ್ತದ ಬೀಜವನ್ನು ಸತ್ಯನಾರಾಯಣ ಬೆಳೇರಿ ಅವರ ಸಂಗ್ರಹಕ್ಕೆ ಮಧುಸೂಧನ ಆಯರ್ ಹಸ್ತಾಂತರಿಸಿದರು.
ಕೃತಿ ಬಿಡುಗಡೆಗೆ ಮುನ್ನ ಕೃತಿಕಾರ ನರೇಂದ್ರ ರೈ ದೇರ್ಲ ಮುನ್ನುಡಿಯಾಗಿ ಮಾತನಾಡಿ, ರಾಜಕೀಯದವರಿಗೆ ಕೃಷಿಯ ಬಗೆಗಿನ ಇಚ್ಛಾಶಕ್ತಿಯ ಕೊರತೆಯಿಂದ ಕೃಷಿಗೆ ಅಗತ್ಯ ಮನ್ನಣೆ ಲಭಿಸದ ಸ್ಥಿತಿ ನಿರ್ಮಾಣವಾಗಿದೆ. ಗದ್ದೆ, ಜಮೀನು ಇಲ್ಲದಿದ್ದರೂ, 650ಕ್ಕೂ ಹೆಚ್ಚು ಭತ್ತದ ತಳಿಗಳ ಸಂವರ್ಧನೆ, ಸಂರಕ್ಷಣೆ ನಡೆಸಿರುವ ಸತ್ಯನಾರಾಯಣ ಬೆಳೇರಿ ಅವರ ಸಧನೆ ದೇಶಕ್ಕೆ ಮಾದರಿಯಾಗಿದೆ. ನಾಡಿನ ಹೆಗ್ಗುರುತಾಗಿರುವ ಸತ್ಯನಾರಾಯಣ ಬೆಳೇರಿ ಅವರ ಬಗೆಗಿನ ಕೃತಿ ಓದುಗನ ಎದೆಯೊಳಗೆ ತೆರೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕಾಸರಗೋಡಿನ ಹಿರಿಯ ಲೇಖಕ ನರಸಿಂಗ ರಾವ್ ಕಾಸರಗೋಡು ಅವರು "ಭತ್ತದ ತಳಿಯ ಕಾವಲುಗಾರ" ಕೃತಿಯನ್ನು ಬಿಡುಗಡೆ ಮಾಡಿದರು. ಸತ್ಯನಾರಾಯಣ ಬೆಳೇರಿ ಅವರಿಗೆ ಪದ್ಮಶ್ರೀ ದೊರೆಯಲು ಮಾರ್ಗದರ್ಶಕರಾಗಿ ಸಹಕರಿಸಿದ ಕರ್ನಾಟಕ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳಾದ ಡಾ. ಉಲ್ಲಾಸ್ ಹಾಗೂ ಡಾ. ಮಲ್ಲಿಕಾರ್ಜುನ ಎಲ್ ಅವರಿಗೆ ಮೊದಲ ಪ್ರತಿ ಹಂಚಿ ಬಿಡುಗಡೆ ನಡೆಯಿತು.
ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯದ ಆಡಳಿತ ಮೊಕ್ತೇಸರ ಗಂಗಾಧರ ಬಲ್ಲಾಳ್, ಕನ್ನಡ ಸಾಃಇತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಡಾ. ಮೋಹನದಾಸ್ ರೈ ಬೆಳ್ಳೂರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸತ್ಯನಾರಾಯಣ ಬೇಳೇರಿ ತನ್ನ ಸಾಧನೆಯ ಪಯಣದ ಬಗ್ಗೆ ಮೆಲುಕು ಹಾಕಿ ಕೃತಜ್ಞತೆಯ ಮಾತನ್ನಾಡಿದರು.
ದಯಾನಂದ ರೈ ಕಳುವಾಜೆ ಸ್ವಾಗತಿಸಿದರು. ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಕುಞÂರಾಮ ಮಣಿಯಾಣಿ ವಂದಿಸಿದರು.



