ಪಾಲ್ಘರ್: ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬನನ್ನು ಇಟ್ಟಿಗೆ ಭಟ್ಟಿ ಮಾಲೀಕ ಅಪಹರಿಸಿ, ಚಿತ್ರಹಿಂಸೆ ನೀಡಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.
ಸುಭಾಷ್ ಶಿನ್ವರ್ ಭೋಯಿರ್ (25) ಅವರನ್ನು ಮರಕ್ಕೆ ತಲೆಕೆಳಗಾಗಿ ನೇತು ಹಾಕಿ, ಆರೋಪಿ ನಂದು ದೇವಲೀಕರ್ ಮತ್ತು ಆತನ ಸಹಚರ ಬುಧವಾರ ಚಿತ್ರಹಿಂಸೆ ನೀಡಿದ್ದಾನೆ.
ಆರೋಪಿಗಳು ಭಿವಂಡಿ ನಿವಾಸಿಗಳಾಗಿದ್ದು, ಇಬ್ಬರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
'ಸುಭಾಷ್ ಅಣ್ಣನಿಗೆ ಭಟ್ಟಿ ಮಾಲೀಕ ₹50,000 ಸಾಲ ನೀಡಿದ್ದ. ಅಣ್ಣನನ್ನು ಹುಡುಕುವ ನೆಪದಲ್ಲಿ ಬುಧವಾರ ಮಧ್ಯಾಹ್ನ ಸುಭಾಷ್ ಅವರನ್ನು ನಾಲ್ಕು ಚಕ್ರದ ವಾಹನಕ್ಕೆ ಹತ್ತಿಸಿಕೊಂಡಿದ್ದಾನೆ. ಸ್ಥಳೀಯ ಇಟ್ಟಿಗೆ ಭಟ್ಟಿಗಳಲ್ಲಿ ಹುಡುಕಿ, ಆತ ಸಿಗದಿರುವುದರಿಂದ ಸುಭಾಷ್ ಅವರನ್ನು ಭಿವಂಡಿ ಬಳಿಯಿರುವ ತನ್ನ ಇಟ್ಟಿಗೆ ಭಟ್ಟಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾನೆ. ಅವನು ಹಾಗೂ ಸಹಚರ ಸೇರಿ ಕೈ-ಕಾಲು ಕಟ್ಟಿ, ಮರಕ್ಕೆ ತಲೆಕೆಳಗಾಗಿ ನೇತು ಹಾಕಿದ್ದಾರೆ. ಅಲ್ಲದೇ, ಗಾಯಕ್ಕೆ ಖಾರದ ಪುಡಿ ಹಾಕಿ ಹಿಂಸೆ ನೀಡಿದ್ದಾರೆ ಎಂದು ಪೊಲೀಸರು ಎಫ್ಐಆರ್ನಲ್ಲಿ ತಿಳಿಸಿದ್ದಾರೆ.

