ಪೆರ್ಲ: ಎಣ್ಮಕಜೆ ಗ್ರಾಮಪಂಚಾಯಿತಿ ಅಧೀನದ ಸಾರ್ವಜನಿಕ ಆಸ್ತಿಯನ್ನು ಹರಾಜು ನಡೆಸದೆ ಅಥವಾ ಆಡಳಿತ ಸಮಿತಿಯ ನಿರ್ಧಾರ ತೆಗೆದುಕೊಳ್ಳದೆ ಅಕ್ರಮವಾಗಿ ಕಚೇರಿಯಿಂದ ಸಾಗಿಸಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಪಿಎಂ ಎಣ್ಮಕಜೆ ಸ್ಥಳೀಯ ಸಮಿತಿ ಆಗ್ರಹಿಸಿದೆ.
ಪಂಚಾಯಿತಿ ಕಚೇರಿ ಹಾಗೂ ಪಂಚಾಯತ್ ಕಚೇರಿಯ ಅಧೀನದಲ್ಲಿರುವ ಇತರ ಸಂಸ್ಥೆಗಳ ಬೆಲೆಬಾಳುವ ಪಿಠೋಪಕರಣಗಳು, ಇಲೆಕ್ಟ್ರಾನಿಕ್ ಉಪಕರಣಗಳು ಮತ್ತು ಕಬ್ಬಿಣದ ಸಾಮಗ್ರಿಗಳನ್ನು ನಿಯಮ ವಿರುದ್ಧವಾಗಿ ಸಾಗಿಸಲಾಗಿದೆ
ಪಂಚಾಯಿತಿಯ ಹಸಿರು ಕ್ರಿಯಾ ಸೇನೆಯ ಪಿಕಪ್ ವಾಹನ ಒಳಗೊಂಡಂತೆ ವಿವಿಧ ವಾಹನಗಳಲ್ಲಿ ಈ ಸಾಮಗ್ರಿ ಸಾಗಿಸಲಾಗಿದೆ. ಪೀಠೋಪಕರಣಗಳಲ್ಲಿ ಕೆಲವನ್ನು ಮುಂಡಿತ್ತಡ್ಕ ಪಳ್ಳಂನಲ್ಲಿರುವ ಪೀಠೋಪಕರಣ ಅಂಗಡಿಗೆ ಮಾರಾಟಮಾಡಲಾಗಿದೆ, ಸ್ಥಳೀಯರು ಈ ವಿಷಯವನ್ನು ಪಂಚಾಯಿತಿ ಕಾರ್ಯದರ್ಶಿಯ ಗಮನಕ್ಕೆ ತಂದಿದ್ದರೂ, ಕಾರ್ಯದರ್ಶಿ ದೂರು ದಾಖಲಿಸಲು ತಯಾರಾಗಲಿಲ್ಲ.
ಸಿಪಿಎಂ ಎಣ್ಮಕಜೆ ಸ್ಥಳೀಯ ಸಮಿತಿ ಕಾರ್ಯದರ್ಶಿ ವಿ.ವಿನೋದ್ ಅವರು ಸಾರ್ವಜನಿಕ ಅಸ್ಥಿಯನ್ನು ದುರುಪಯೋಗ ಪಡಿಸಿಕೊಂಡಿರುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪಂಚಾಯಿತಿ ಆಸ್ತಿ ನೋಂದಣಿಯಲ್ಲಿ ಒಳಗೊಂಡ ಅಸ್ತಿಗಳು ನಷ್ಠಗೊಂಡಾಗ ಪೆÇಲೀಸರಿಗೆ ದೂರು ನೀಡದ ಕಾರ್ಯದರ್ಶಿಯವರ ನಿಲುವು ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡಿದಂತಾಗಿದೆ. ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಸದಸ್ಯರ ಮೌನ ಸಂಶಯಕ್ಕೆ ಕಾರಣವಾಗಿರುವುದಾಗಿಯೂ ತಿಳಿಸಿರುವ ವಿನೋದ್, ಈ ಬಗ್ಗೆ ಪಂಚಾಯಿತಿ ಸಹಾಯಕ ನಿರ್ದೇಶಕರಿಗೆ ದೂರು ನೀಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

