ಕಾಸರಗೋಡು: ಕರಿಚ್ಚೇರಿ ದೀಪಸ್ತಂಭ ಶ್ರೀ ವೆಂಕಟ್ರಮಣ ದೇವಸ್ಥಾನದ ನವೀಕರಣ ಮತ್ತು ಪುನ: ಪ್ರತಿಷ್ಠಾಪನೆ ಬ್ರಹ್ಮಕಲಶ ಮಹೋತ್ಸವವನ್ನು ಮಾರ್ಚ್ 19 ರಿಂದ 28ರವರೆಗೆ ಜರುಗಲಿದೆ. ಶತಮಾನಗಳಷ್ಟು ಹಳೆಯದಾದ ದೀಪಸ್ತಂಭ ದೇವಾಲಯದ ಪುನ: ಪ್ರತಿಷ್ಠಾಪನೆಯ ನಾಲ್ಕು ದಶಕಗಳ ನಂತರ, ನವೀಕರಣದೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿ ಪದಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
19ರಂದು ಕರಿಚ್ಚೇರಿಯ ನಿಟ್ಟಾಂಕೋಟ್ ಭಗವತಿ ದೇವಸ್ಥಾನ ಮತ್ತು ಪೆರ್ಲಡ್ಕಂ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ದೇವಸ್ಥಾನದ ವರೆಗೆ ನಡೆಯುವುದು. ಮಾರ್ಚ್ 20 ರಂದು ಸಂಜೆ ಬ್ರಹ್ಮ ಐ. ಕೆ ಕೇಶವ ತಂತ್ರಿ, ಐ ಕೆ ಪದ್ಮಭನ್ ತಂತ್ರಿ, ಐ ಕೆ ಕೃಷ್ಣದಾಸ ತಂತ್ರಿ ಮತ್ತು ಎಡನೀರು ಶ್ರೀಮದ್ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ದೇವಾಲಯಕ್ಕೆ ಬರಮಾಡಿಕೊಳ್ಳಲಾಗುವುದು.
ನಂತರ ತಾಂತ್ರಿಕ ಪೂಜಾ ವಿಧಿವಿಧಾನಗಳು ನಡೆಯುವುದು. ಈ ಸಂದರ್ಭ ವಿವಿಧ ಕಲಾ, ಸಂಸ್ಕøತಿಕ ಕಾರ್ಯಕ್ರಮಗಳ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಉದುಮ ಶಾಸಕ ಸಿ.ಎಚ್. ಕುಞಂಬು ಮೊದಲಾದವರು ಭಾಗವಹಿಸುವರು.
ಮಾರ್ಚ್ 25ರಂದು ನೂರ ಎಂಟು ತೆಂಗಿನಕಾಯಿಗಳಿಂದ ಮಹಾ ಗಣಪತಿ ಹೋಮ, ನಂತರ 9:29 ರಿಂದ 11:32 ರ ಶುಭಮುಹೂರ್ತದಲ್ಲಿ ಶ್ರೀದೇವರ ಪ್ರತಿಷ್ಟೆ, ನಂತರ ಉಪ ದೇವತೆಗಳಾದ ಗಣಪತಿ ಶಾಸ್ತಾರ, ದುರ್ಗಾ ದೇವಿ, ಮತ್ತು ಉಪ ದೇವತೆಗಳಾದ ವಿಷ್ಣು ಮೂರ್ತಿಯ ಪ್ರತಿಷ್ಠೆ, ಹೊರ ಗೋಪುರದಲ್ಲಿ, ಚಾಮುಂಡಿ ನಾಗ ಮತ್ತು ಬ್ರಹ್ಮ ರಾಕ್ಷಸರ ಪ್ರತಿಷ್ಠಾಪನೆ ನಡೆಯುವುದು.
ಏಪ್ರಿಲ್ 1 ರಂದು ರಾತ್ರಿ 8 ಗಂಟೆಗೆ, ತೆಯ್ಯಂ ಕೂಡಲ್, 2 ರಂದು ಬೆಳಿಗ್ಗೆ ವಿಷ್ಣು ಮೂರ್ತಿ ದೈವ ಮತ್ತು ಶ್ರೀ ವಟ್ಟಕ್ಕಯತ್ತ್ ಚಾಮುಂಡಿ ಅಮ್ಮನವರ ಕೋಲನಡೆಯುವುದು.



