ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್ಪಿ ಪಕ್ಷಗಳ ಹಲವಾರು ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಸೇರಿ ವಾಣಿಜ್ಯ LPG ಸಿಲಿಂಡರ್ ಕೊರತೆಯ ಬಗ್ಗೆ ಸರ್ಕಾರದಿಂದ ಉತ್ತರ ಕೇಳಿ ಪ್ರತಿಭಟನೆ ನಡೆಸಿದರು. ಈ ವೇಳೆ 'ನಾಮ್ ನರೇಂದರ್, ಕಾಮ್ ಶರಣಾಗತಿ' ಹಾಗೂ 'ಮೋದಿ ಜಿ, LPG' ಎಂಬ ಘೋಷಣೆಗಳನ್ನು ಕೂಗಿದರು.
ಪ್ರಿಯಾಂಕಾ ಗಾಂಧಿ ಸೇರಿದಂತೆ ಮಹಿಳಾ ವಿರೋಧ ಪಕ್ಷದ ಸಂಸದರು ಇಟ್ಟಿಗೆ ಅಡುಗೆ ಒಲೆಯೊಂದಿಗೆ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, "ಪ್ರಧಾನಿ ಜನರು ಭಯಭೀತರಾಗಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಅವರು ಸ್ವತಃ ಸಂಪೂರ್ಣವಾಗಿ ವಿಭಿನ್ನ ಕಾರಣಗಳಿಂದ ಭಯಭೀತರಾಗಿದ್ದಾರೆ. ಎಪ್ಸ್ಟೀನ್ ಫೈಲ್ಸ್ ಮತ್ತು ಅಮೆರಿಕದಲ್ಲಿನ ಅದಾನಿ ಪ್ರಕರಣದಿಂದ ಅವರು ಆತಂಕದಲ್ಲಿದ್ದಾರೆ. ಅದರಿಂದಲೇ ಅವರು ಸದನದೊಳಗೆ ಬರಲು ಸಾಧ್ಯವಾಗುತ್ತಿಲ್ಲ," ಎಂದು ಆರೋಪಿಸಿದರು.
"ನಿನ್ನೆ ಪ್ರಧಾನಿಯವರ ಕುರ್ಚಿ ಖಾಲಿಯಾಗಿರುವುದನ್ನು ನೀವು ನೋಡಿದ್ದೀರಿ. ದೇಶದ ಜನರಿಗೆ ಭಯಪಡಬೇಡಿ ಎಂದು ಹೇಳುತ್ತಿರುವ ಅವರು ಸ್ವತಃ ಭಯಭೀತರಾಗಿದ್ದಾರೆ," ಎಂದೂ ಹೇಳಿದರು.
ಪಶ್ಚಿಮ ಏಷ್ಯಾದ ಪರಿಸ್ಥಿತಿ ಹಾಗೂ ಅದರ ಭಾರತದ ಮೇಲೆ ಬೀರುವ ಪರಿಣಾಮಗಳ ಕುರಿತು ಸಂಸತ್ತಿನಲ್ಲಿ ಪೂರ್ಣ ಪ್ರಮಾಣದ ಚರ್ಚೆ ನಡೆಸಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಜನರು ಭಯಭೀತರಾಗಬಾರದು ಎಂದು ಮನವಿ ಮಾಡಿ, ಸಾರ್ವಜನಿಕ ಹಿತಾಸಕ್ತಿಯನ್ನು ಸರ್ಕಾರ ರಕ್ಷಿಸಲಿದೆ ಎಂದು ಭರವಸೆ ನೀಡಿದ್ದರು. ವಾಣಿಜ್ಯ LPG ಕೊರತೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸುವಲ್ಲಿ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಇಂಧನ ಪೂರೈಕೆ ಸರಪಳಿಗಳು ಅಸ್ತವ್ಯಸ್ತವಾಗಿದ್ದು, ದೇಶದ ಹಲವೆಡೆ ವಾಣಿಜ್ಯ LPG ಸಿಲಿಂಡರ್ ಗಳ ಕೊರತೆ ಕಾಣಿಸಿಕೊಂಡಿದೆ. ಇದರಿಂದ ರೆಸ್ಟೋರೆಂಟ್ ಗಳು, ಬೀದಿಬದಿ ಆಹಾರ ಮಾರಾಟಗಾರರು ಮತ್ತು ಅಡುಗೆ ಉದ್ಯಮಗಳು ಪರ್ಯಾಯ ವ್ಯವಸ್ಥೆಗಳಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಇಂಡಕ್ಷನ್ ಕುಕ್ ಟಾಪ್ ಗಳು, ಮೈಕ್ರೋ ವೇವ್ ಗಳು, ಉರುವಲು ಮತ್ತು ಸೌರ ಆಯ್ಕೆಗಳತ್ತ ಕೆಲವು ಉದ್ಯಮಗಳು ಮುಖ ಮಾಡುತ್ತಿವೆ. ಸರ್ಕಾರ ಮನೆ ಬಳಕೆಯ ಅಡುಗೆ ಅನಿಲ ಪೂರೈಕೆಗೆ ಆದ್ಯತೆ ನೀಡುತ್ತಿರುವುದರಿಂದ ವಾಣಿಜ್ಯ LPGಯ ಮೇಲೆ ಅವಲಂಬಿತವಾಗಿರುವ ಸಣ್ಣ ತಿನಿಸು ಮಳಿಗೆಗಳಿಂದ ಹಿಡಿದು ಉನ್ನತ ಮಟ್ಟದ ರೆಸ್ಟೋರೆಂಟ್ ಗಳವರೆಗೆ ಅನೇಕ ಉದ್ಯಮಗಳು ಆತಂಕದಲ್ಲಿವೆ. ಕೆಲವರು ಮುಂದಿನ ದಿನಗಳಲ್ಲಿ ತಾತ್ಕಾಲಿಕ ಮುಚ್ಚುವಿಕೆಯ ಸಾಧ್ಯತೆಯನ್ನೂ ಸೂಚಿಸಿದ್ದಾರೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅನಿಯಮಿತ LPG ಪೂರೈಕೆಯಿಂದ ಅನೇಕ ಅಡುಗೆಮನೆಗಳು ಸಂಕಷ್ಟ ಎದುರಿಸುತ್ತಿದ್ದು, ಹಲವು ರೆಸ್ಟೋರೆಂಟ್ ಗಳಲ್ಲಿ ಒಂದು ಅಥವಾ ಎರಡು ದಿನಗಳಷ್ಟೇ LPG ಸ್ಟಾಕ್ ಉಳಿದಿದೆ ಎಂದು ವರದಿಯಾಗಿದೆ. ಇದರಿಂದ ತಾತ್ಕಾಲಿಕ ಮುಚ್ಚುವಿಕೆ ಮತ್ತು ಸಿಬ್ಬಂದಿ ವೇತನದ ಬಗ್ಗೆ ಕಳವಳ ಹೆಚ್ಚಾಗಿದೆ ಎಂದು ಕೈಗಾರಿಕಾ ಪ್ರತಿನಿಧಿಗಳು ತಿಳಿಸಿದ್ದಾರೆ.
ಆದರೆ ಹೆಚ್ಚುತ್ತಿರುವ ಆತಂಕಗಳ ನಡುವೆ ಸರ್ಕಾರ ಹಾಗೂ ತೈಲ ಕಂಪನಿಗಳು ದೇಶೀಯ ಬಳಕೆಯ LPG ಸಿಲಿಂಡರ್ಗಳ ಪೂರೈಕೆ ಸುರಕ್ಷಿತವಾಗಿದ್ದು, ಜನರು ಆತಂಕಪಡಬೇಕಾಗಿಲ್ಲ ಎಂದು ಭರವಸೆ ನೀಡಿವೆ.

