ಜಗತ್ತು ಇಂಧನ ಕ್ಷೇತ್ರದಲ್ಲಿ ವರ್ತಮಾನದ ಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ ಎಂದು ಹೇಳಿದ ಪುರಿ, ದಾಖಲಿತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಬೆಟ್ಟು ಮಾಡಿದರು.
ಪಶ್ಚಿಮ ಏಶ್ಯಾದಲ್ಲಿ ಸಂಘರ್ಷಕ್ಕೆ ಭಾರತವು ಯಾವುದೇ ರೀತಿಯಲ್ಲಿ ಕಾರಣವಲ್ಲದಿದ್ದರೂ ಅದರ ಪರಿಣಾಮಗಳನ್ನು ಎದುರಿಸಬೇಕಿದೆ ಎಂದು ಹೇಳಿದ ಅವರು, ತೈಲ ಸಂಸ್ಕರಣಾಗಾರಗಳು ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯಾಚರಿಸುತ್ತಿವೆ. ಹಲವಾರು ಸಂದರ್ಭಗಳಲ್ಲಿ ಅವು ಶೇ.100ಕ್ಕೂ ಹೆಚ್ಚಿನ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ. ಪೆಟ್ರೋಲ್, ಡೀಸಿಲ್, ಸೀಮೆಎಣ್ಣೆ ಅಥವಾ ವಿಮಾನ ಇಂಧನದ ಕೊರತೆಯಿಲ್ಲ. ಈ ಎಲ್ಲ ಇಂಧನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದರು.
ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ವ್ಯಕ್ತಪಡಿಸಿದ ಕಳವಳಗಳಿಗೆ ಉತ್ತರಿಸಿದ ಪುರಿ, ಭಾರತದಲ್ಲಿಯ 33 ಕೋಟಿ ಕುಟುಂಬಗಳು ಯಾವುದೇ ಇಂಧನ ಕೊರತೆಯನ್ನು ಎದುರಿಸದಿರಲು ಮೋದಿ ಸರಕಾರವು ಅತ್ಯಂತ ಹೆಚ್ಚಿನ ಆದ್ಯತೆ ನೀಡಿದೆ. ಭಾರತವು ವರ್ಷಗಳಿಂದಲೂ ತನಗೆ ಕಚ್ಚಾತೈಲ ಪೂರೈಕೆ ಮೂಲಗಳನ್ನು ವೈವಿಧ್ಯಗೊಳಿಸುತ್ತಲೇ ಬಂದಿದೆ ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ತೈಲ ಸಾಗಣೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ ಎಂದು ತಿಳಿಸಿದರು.

