ನವದೆಹಲಿ: ವಿದೇಶಗಳಿಂದ ದೇಣಿಗೆ ಪಡೆಯುವ ಎನ್ಜಿಒಗಳ ಮೇಲಿನ ಮೇಲ್ವಿಚಾರಣೆಯನ್ನು ಮತ್ತಷ್ಟು ಬಿಗಿಗೊಳಿಸುವುದು ಹಾಗೂ ಪರವಾನಗಿ ರದ್ದುಗೊಂಡ ಎನ್ಜಿಒಗಳ ಸ್ವತ್ತುಗಳ ಜಪ್ತಿ ಮತ್ತು ನಿರ್ವಹಣೆಗೆ ಹೊಸ ಪ್ರಾಧಿಕಾರ ರಚನೆ ಸೇರಿ ಹಲವು ಅವಕಾಶಗಳನ್ನು ಒಳಗೊಂಡ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಬುಧವಾರ ಮಂಡಿಸಲಾಯಿತು.
ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು 'ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ-2026'ಅನ್ನು ಲೋಕಸಭೆಯಲ್ಲಿ ಮಂಡಿಸಿದರು.
ವಿದೇಶಗಳಿಂದ ಪಡೆಯುವ ದೇಣಿಗೆಗಳ ಮೇಲ್ವಿಚಾರಣೆ, ನಿರ್ವಹಣೆಗೆ 'ಉದ್ದೇಶಿತ ಪ್ರಾಧಿಕಾರ'ದ ಮೂಲಕ ಸಮಗ್ರ ಚೌಕಟ್ಟು ರೂಪಿಸುವ ಅವಕಾಶಗಳನ್ನು ಈ ಮಸೂದೆ ಒಳಗೊಂಡಿದೆ ಎಂದು ಸಚಿವ ರಾಯ್ ಸದನಕ್ಕೆ ತಿಳಿಸಿದರು.
'ಎನ್ಜಿಒಗಳ ನೋಂದಣಿ ರದ್ದುಗೊಂಡ ಅಥವಾ ಒಪ್ಪಿಸಿದ ಸಂದರ್ಭಗಳಲ್ಲಿ, ಅವುಗಳು ಪಡೆಯುತ್ತಿದ್ದ ವಿದೇಶಿ ದೇಣಿಗೆಗಳು ಹಾಗೂ ಅವುಗಳಿಂದ ಸೃಜಿಸಲಾದ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿ ಕೆಲ ಕಾನೂನಾತ್ಮಕ ನ್ಯೂನತೆಗಳಿರುವುದನ್ನು ಗುರುತಿಸಲಾಗಿದೆ' ಎಂದೂ ಅವರು ಹೇಳಿದರು.
'ಪೂರ್ವಾನುಮತಿ ಪಡೆದ ಬಳಿಕ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಹಾಗೂ ಬಳಕೆ ಮಾಡಿಕೊಳ್ಳುವುದಕ್ಕೆ ಕಾಲಮತಿ ನಿಗದಿ ಮಾಡುವ ಅವಕಾಶಗಳನ್ನು ಈ ಮಸೂದೆ ಒಳಗೊಂಡಿದೆ. ಪರವಾನಗಿ ಅವಧಿ ಮುಕ್ತಾಯಗೊಂಡ ಸಂದರ್ಭದಲ್ಲಿ, ಎನ್ಜಿಒಗಳ ಕಾರ್ಯಾಚರಣೆ ಸಮಾಪ್ತಿಗೊಳಿಸುವ ಪ್ರಕ್ರಿಯೆ ನೆರವೇರಿಸುವುದು, ನವೀಕರಣ, ದಂಡಗಳನ್ನು ತರ್ಕಬದ್ಧಗೊಳಿಸುವುದು ಹಾಗೂ ತನಿಖೆ ಆರಂಭಕ್ಕೂ ಮುನ್ನ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಬೇಕು ಎಂಬ ಹಲವಾರು ಅವಕಾಶಗಳು ಕೂಡ ಮಸೂದೆಯಲ್ಲಿವೆ' ಎಂದು ವಿವರಿಸಿದರು.
'ಈ ಮಸೂದೆ ಬಹಳ ಅಪಾಯಕಾರಿ' ಎಂಬ ವಿಪಕ್ಷಗಳ ಸದಸ್ಯರ ಟೀಕೆಗೆ,'ಬಲವಂತದ ಮತಾಂತರಕ್ಕೆ ಹಾಗೂ ವೈಯಕ್ತಿಕ ಲಾಭಕ್ಕಾಗಿ ವಿದೇಶಿ ದೇಣಿಗೆಗಳನ್ನು ಬಳಸುವವರಿಗೆ ಖಂಡಿತವಾಗಿಯೂ ಈ ಮಸೂದೆ ಅಪಾಯಕಾರಿ' ಎಂದು ರಾಯ್ ಪ್ರತಿಕ್ರಿಯಿಸಿದರು.
'ವಿದೇಶಿ ದೇಣಿಗೆಗಳ ದುರ್ಬಳಕೆಯನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಹಿಸುವುದಿಲ್ಲ. ದುರ್ಬಳಕೆ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು' ಎಂದೂ ಹೇಳಿದರು.
ಪ್ರಮುಖ ಅಂಶಗಳು
* ವಿದೇಶಿ ದೇಣಿ ನಿಯಂತ್ರಣ ಕಾಯ್ದೆ(ಎಫ್ಸಿಆರ್ಎ) 2010 ಅನ್ನು 2011ರ ಮೇ 1ರಂದು ಜಾರಿಗೊಳಿಸಲಾಯಿತು. 2016 2018 ಹಾಗೂ 2020ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ
* ವಿವಿಧ ಸಂಸ್ಥೆಗಳು ತನಿಖೆ ನಡೆಸುವುದನ್ನು ತಪ್ಪಿಸುವುದು ದಂಡದ ಪ್ರಮಾಣದಲ್ಲಿನ ವ್ಯತ್ಯಾಸ ನಿವಾರಣೆ ಸೇರಿ ಹಲವು ನ್ಯೂನತೆಗಳನ್ನು ಸರಿಪಡಿಸುವ ಅವಕಾಶಗಳನ್ನು ಮಸೂದೆ ಒಳಗೊಂಡಿದೆ
* ಎಫ್ಸಿಆರ್ಎ ಅಡಿ ದೇಶದಲ್ಲಿ ಪ್ರಸ್ತುತ 16 ಸಾವಿರ ಎನ್ಜಿಒಗಳು ನೋಂದಣಿ ಮಾಡಿಸಿವೆ
* ಈ ಎನ್ಜಿಒಗಳು ವಾರ್ಷಿಕ ಅಂದಾಜು ₹22 ಸಾವಿರ ಕೋಟಿಗೂ ಅಧಿಕ ವಿದೇಶಿ ದೇಣಿಗೆ ಪಡೆಯುತ್ತಿವೆ.

