ನವದೆಹಲಿ: ರಷ್ಯಾದಿಂದ ಭಾರತದ ರಿಫೈನರಿಗಳು ತೈಲ ಖರೀದಿ ಮಾಡುವುದಕ್ಕಾಗಿ ಅಮೆರಿಕ ನಿರ್ಬಂಧ ಸಡಿಲಿಸಿರುವ ಕ್ರಮವು ಪ್ರಧಾನಿ ನರೇಂದ್ರ ಮೋದಿ ಅವರ 'ರಕ್ಷಣಾತ್ಮಕ ತೈಲ ರಾಜತಾಂತ್ರಿಕತೆ'ಗೆ ದೊರೆತ ಯಶಸ್ಸು ಎಂದು ಬಿಜೆಪಿ ಶುಕ್ರವಾರ ಹೇಳಿದೆ.
'ದೇಶದಲ್ಲಿ ತೈಲದ ಕೊರತೆ ಇದೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಳ್ಳು ಸುದ್ದಿ ಹಬ್ಬಿಸಿ, ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ರಾಜತಾಂತ್ರಿಕತೆಗೆ ಸಿಕ್ಕ ಯಶಸ್ಸು ಸಿಕ್ಕಿದೆ. ಈ ಕಾರಣಕ್ಕೆ, 'ಭಾರತ ವಿರೋಧಿ ಧೋರಣೆ' ಅನುಸರಿಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ' ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ತಂತ್ರಗಾರಿಕೆ ವಿಚಾರದಲ್ಲಿಯೂ ಸ್ಪಷ್ಟತೆ ಹೊಂದಿದೆ. ಇದನ್ನು ಸಹಿಸದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್, ಕೇಂದ್ರದ ನಡೆಯನ್ನು ದ್ವೇಷಿಸುತ್ತಿದ್ದಾರೆ' ಎಂದು ಭಂಡಾರಿ ಕುಟುಕಿದ್ದಾರೆ.

