ಕಡಪ: ಪವಿತ್ರ ತಿರುಮಲ ದೇಗುಲಕ್ಕೆ ತುಪ್ಪ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಈ ವೇಳೆ ಸ್ಥಳೀಯರು ಮುಗಿ ಬಿದ್ದು ತುಪ್ಪ ಸಂಗ್ರಹಿಸಿ ಪರಾರಿಯಾದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಕೊಂಡಾಪುರಂ ಮಂಡಲದ ಅನಂತಪುರಂ ಗ್ರಾಮದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಈ ಘಟನೆ ನಡೆದಿದ್ದು, ದುರ್ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್ ಗೆ ಗಾಯಗಳಾಗಿವೆ. ಇಬ್ಬರನ್ನೂ ಸ್ಥಳೀಯ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ನಡುವೆ ಅತ್ತ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್ ನಿಂದ ತುಪ್ಪ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಕೈ ಗೆ ಸಿಕ್ಕ ಬಕೆಟ್, ಬಿಂದಿಗೆ, ಕ್ಯಾನ್ ಗಳನ್ನು ಹಿಡಿದು ತುಪ್ಪ ಸಂಗ್ರಹಿಸಿಕೊಳ್ಳಲು ಮುಗಿಬಿದ್ದಿದ್ದಾರೆ.
ಈ ವಿಚಾರ ನೆರೆಹೊರೆಯ ಗ್ರಾಮಗಳಿಗೂ ಕಾಡ್ಗಿಚ್ಚಿನಂತೆ ಹಬ್ಬಿದ್ದು ಬೇರೆ ಬೇರೆ ಗ್ರಾಮದ ನಿವಾಸಿಗಳೂ ಕೂಡ ತುಪ್ಪ ಸಂಗ್ರಹಿಸಲು ಧಾವಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ ಈ ಟ್ಯಾಂಕರ್ ಪುಣೆಯಿಂದ 21 ಸಾವಿರ ಲೀಟರ್ ತುಪ್ಪದೊಂದಿಗೆ ತಿರುಮಲಕ್ಕೆ ಬರುತ್ತಿತ್ತು. ಆದರೆ ಕಡಪ ಜಿಲ್ಲೆಯ ಕೊಂಡಾಪುರಂ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಈ ವೇಳೆ ತುಪ್ಪ ಸೋರಿಕೆಯಾಗಿದೆ. ಇನ್ನು ಗ್ರಾಮಸ್ಥರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದು ಕೊನೆಗೂ ಹೆಚ್ಚುವರಿ ಸಿಬ್ಬಂದಿಗಳ ಕರೆಸಿಕೊಂಡು ತುಪ್ಪ ಸಂಗ್ರಹಕ್ಕೆ ಬ್ರೇಕ್ ಹಾಕಿದ್ದಾರೆ.
ಲಡ್ಡು ಪ್ರಸಾದಕ್ಕೆ ತಿರುಮಲಕ್ಕೆ ಹೋಗುತ್ತಿದ್ದ ತುಪ್ಪ
ಇನ್ನು ಜಗತ್ ವಿಖ್ಯಾತ ತಿರುಮಲ ದೇಗುಲದಲ್ಲಿ ಲಡ್ಡು ಪ್ರಸಾದಕ್ಕೆ ಎಲ್ಲಿಲ್ಲದ ಬೇಡಿಕೆ. ತಿರುಮಲದ ಲಡ್ಡು ಪ್ರಸಾದ್ ತಯಾರಿಕೆಗೆ ತುಪ್ಪ ಮುಖ್ಯ. ಹೀಗಾಗಿ ತಿರುಪತಿ ತಿರುಮಲ ದೇಗುಲ ಆಡಳಿತ ಮಂಡಳಿ ಕರ್ನಾಟಕ ನಂದಿನಿ ಸೇರಿದಂತೆ ದೇಶದ ವಿವಿಧೆಡೆಯಿಂದ ತುಪ್ಪವನ್ನು ಆಮದು ಮಾಡಿಕೊಳ್ಳುತ್ತದೆ.
ವಿವಿಧ ಡೈರಿಗಳಿಂದ ಬರುವ ತುಪ್ಪವನ್ನು ತಿರುಮಲದಲ್ಲಿ ಪರೀಕ್ಷಿಸಿ ಶೇಖರಿಸಿಡಲಾಗುತ್ತದೆ. ಬಳಿಕ ಅವುಗಳನ್ನು ಲಡ್ಡು ಪ್ರಸಾದ ತಯಾರಿಕೆಗೆ ಬಳಸಲಾಗುತ್ತದೆ.


