ಚಂಡಿಗಢ: ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಪಂಜಾಬ್ ಸಂಸದ ಅಮೃತಪಾಲ್ ಸಿಂಗ್ ಅವರ ಬಂಧನದ ಅವಧಿ ಮುಗಿದಿದೆ. ಅನಂತರ ಈಗ 2023 ಫೆಬ್ರವರಿಯಲ್ಲಿ ನಡೆದ ಅಜ್ನಾಲ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಅವರನ್ನು ಗುರುವಾರ ಬಂಧಿಸಿದ್ದಾರೆ.
ಬಂಧನದ ಬಳಿಕ ಅಮೃತಪಾಲ್ ಸಿಂಗ್ ಅವರನ್ನು ದಿಬ್ರುಗಢದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಅಜ್ನಾಲ ಉಪ ವಿಭಾಗೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅಮೃತಪಾಲ್ ಸಿಂಗ್ಗೆ ಎರಡು ದಿನಗಳ ಪೊಲೀಸ್ ಕಸ್ಟಡಿ ನೀಡಿದೆ. ಈ ಸಂದರ್ಭ ಸಿಂಗ್ ಅವರನ್ನು ದಿಬ್ರುಗಢದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗುತ್ತದೆ.
ಅಮೃತಪಾಲ್ ಸಿಂಗ್ ಅವರನ್ನು ವಿಚಾರಣೆಗೆ ಅಮೃತಸರಕ್ಕೆ ತಂದರೆ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದು. ಆದುದರಿಂದ ಈ ಪ್ರಕರಣದಲ್ಲಿ ಅವರನ್ನು ಬಂಧಿಸಲು ಹಾಗೂ ಅಸ್ಸಾಂ ಜೈಲಿನಲ್ಲೇ ಇರಿಸುವುದನ್ನು ಮುಂದುವರಿಸಲು ಅನುಮತಿ ನೀಡುವಂತೆ ಕೋರಿ ರಾಜ್ಯ ಸರಕಾರ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ವಿಚಾರಣೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಬೇಕು ಎಂದು ಕೂಡ ಸರಕಾರ ಕೋರಿತ್ತು.
ಅಮೃತಪಾಲ್ ಸಿಂಗ್ ಅವರನ್ನು ಬಂಧಿಸಿರುವುದನ್ನು ಎಸ್ಎಡಿಯ ಬಂಡಾಯ ಶಾಸಕ ಮನ್ಪ್ರೀತ್ ಸಿಂಗ್ ಅಯಾಲಿ ಟೀಕಿಸಿದ್ದಾರೆ.
''ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂಸ್ಥೆಗಳನ್ನು ಅಣಕಿಸಲಾಗುತ್ತಿದೆ. ಒಬ್ಬ ಆಯ್ಕೆಯಾದ ಪ್ರತಿನಿಧಿಗೆ ಸ್ವತಂತ್ರ್ಯ ಹಾಗೂ ನ್ಯಾಯಸಮ್ಮತ ವಿಚಾರಣೆಯನ್ನು ನಿರಾಕರಿಸಲಾಗುತ್ತಿದೆ'' ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಪ್ರಕರಣದ ವಿಚಾರಣೆ ಈಗಾಗಲೇ ಅಜ್ನಾಲ ನ್ಯಾಯಾಲಯದ ನಡೆಯುತ್ತಿದೆ ಎಂದು ಅಮೃತಪಾಲ್ ಸಿಂಗ್ ಅವರ ವಕೀಲರಾದ ಹರ್ಪಾಲ್ ಸಿಂಗ್ ಖಾರಾ ಹಾಗೂ ಋತುರಾಜ್ ಸಿಂಗ್ ಪ್ರತಿಪಾದಿಸಿದ್ದಾರೆ.

